ADVERTISEMENT

ಮುಖ್ಯಮಂತ್ರಿ ವಿವೇಚನಾಧಿಕಾರ ಪ್ರಶ್ನಾತೀತವಲ್ಲ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 19:31 IST
Last Updated 2 ಏಪ್ರಿಲ್ 2021, 19:31 IST

ಶಾಸಕರಿಗೆ, ಸಚಿವರು ಪ್ರತಿನಿಧಿಸುವ ಇಲಾಖೆಗಳಿಗೆ ಮತ್ತು ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ಹಂಚಿಕೆ ಮಾಡಲು ಮುಖ್ಯಮಂತ್ರಿಗೆ ವಿವೇಚನಾ ಅಧಿಕಾರ ಇರುವುದು ನಿಜ. ಆದರೆ ಆ ಅಧಿಕಾರ ಬಳಕೆ ಮಾಡುವ ವೈಖರಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಶ್ನಾತೀತವೇನಲ್ಲ. ಆಡಳಿತ ಪಕ್ಷದ ಶಾಸಕರು ಇರುವ ಕ್ಷೇತ್ರಗಳಿಗೆ ಹೆಚ್ಚು ಅನುದಾನ, ಬೇರೆ ಪಕ್ಷದ ಶಾಸಕರು ಇರುವ ಕ್ಷೇತ್ರಕ್ಕೆ ಕಡಿಮೆ ಅನುದಾನ ನೀಡುವ ತಾರತಮ್ಯದ ವಿವೇಚನಾಧಿಕಾರ ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತದೆ. ಅದೇ ರೀತಿ ಸಚಿವರ ಖಾತೆಯ ವಿಚಾರದಲ್ಲಿ ಸಲಹೆ ನೀಡಲು ಮುಖ್ಯಮಂತ್ರಿಗೆ ಅಧಿಕಾರ ಇದೆ. ಹಾಗಂತ ಮಂತ್ರಿಗಳ ಗಮನಕ್ಕೆ ತರದೇ ಆಯಾ ಇಲಾಖೆಗೆ ಆಯವ್ಯಯದಲ್ಲಿ ಮೀಸಲಿಟ್ಟ ಹಣವನ್ನು ಇನ್ನೊಂದು ಇಲಾಖೆಗೆ ವರ್ಗಾಯಿಸುವುದು ವಿವೇಚನಾ ಅಧಿಕಾರದ ದುರ್ಬಳಕೆಯಲ್ಲದೆ ಮತ್ತೇನೂ ಅಲ್ಲ.

ರಾಜ್ಯದ ಆಡಳಿತ ನಡೆಸಲು ಸೂಕ್ತ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ಮತದಾರ ತನ್ನ ಮತವನ್ನು ಮಾತ್ರ ನೀಡುವುದಿಲ್ಲ, ಜೊತೆಗೆ ಆಡಳಿತ ವೆಚ್ಚ ಭರಿಸಲು ಹೆಜ್ಜೆ ಹೆಜ್ಜೆಗೂ ತೆರಿಗೆಯನ್ನು ಸಹ ನೀಡುತ್ತಾನೆ. ಆ ತೆರಿಗೆಯ ಹಣದ ಲೆಕ್ಕ ಕೇಳುವ ಹಕ್ಕು ಎಲ್ಲರಿಗೂ ಇದೆ. ವ್ಯವಸ್ಥೆ ಹೀಗಿರುವಾಗ ಮುಖ್ಯಮಂತ್ರಿಯವರ ಅನುದಾನ ಹಂಚಿಕೆಯ ವಿವೇಚನಾಧಿಕಾರ ಪ್ರಶ್ನಾತೀತವೇನಲ್ಲ.

ಗಣಪತಿ ನಾಯ್ಕ್, ಕಾನಗೋಡ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.