ADVERTISEMENT

ವಾಚಕರ ವಾಣಿ | ಕನ್ನಡಕ್ಕೆ ಮಡಿವಂತಿಕೆ ಸಲ್ಲದು

​ಪ್ರಜಾವಾಣಿ ವಾರ್ತೆ
Published 2 ಮೇ 2020, 1:28 IST
Last Updated 2 ಮೇ 2020, 1:28 IST
   

ಕೊರೊನಾ ವೈರಾಣು ಕಾಣಿಸಿಕೊಂಡಮೇಲೆ ನಮ್ಮ ಮಾಧ್ಯಮಗಳಲ್ಲಿ ಕೆಲವು ಇಂಗ್ಲಿಷ್ ಪದಗಳನ್ನು ಹೆಚ್ಚಾಗಿ ಬಳಸುತ್ತಿರುವುದಕ್ಕೆ ಕಿಕ್ಕೇರಿ ಎಂ. ಚಂದ್ರಶೇಖರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ (ಪ್ರ.ವಾ., ಏ. 30). ಈ ಪದಗಳಿಗೆ ಸಮಾನಾರ್ಥಕ ಕನ್ನಡ ಪದಗಳನ್ನು ಬಳಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಭಾಷೆಯು ಸಂಸ್ಕೃತ, ಹಿಂದಿ, ಅರೇಬಿಕ್, ಪಾರ್ಸಿ, ಬೆಂಗಾಲಿ, ಇಂಗ್ಲಿಷ್, ಮರಾಠಿ, ತೆಲುಗು, ತಮಿಳು, ಮಲಯಾಳಂ ಮುಂತಾದ ಭಾಷೆಗಳಿಂದ ಅನೇಕ ಪದಗಳನ್ನು ಸ್ವೀಕರಿಸಿ ಬೆಳೆದಿದೆ, ಬೆಳೆಯುತ್ತಿದೆ. ಕನ್ನಡ ಭಾಷೆಗೆ ಮಡಿವಂತಿಕೆ ಇಲ್ಲ, ಇರಲೂಬಾರದು. ಲಾಕ್‍ಡೌನ್, ಸೀಲ್‍ಡೌನ್, ಗ್ರೀನ್‍ಜೋನ್, ಡೇಂಜರ್‌ಜೋನ್‌ನಂತಹ ಪದಗಳು ಈಗ ಇಂಗ್ಲಿಷ್ ತಿಳಿಯದವರಿಗೂ ಸುಲಭವಾಗಿ ಅರ್ಥವಾಗುತ್ತವೆ. ಅಲ್ಲಿಗೆ ಭಾಷೆಯ ಕೆಲಸ ಮುಗಿಯಿತು. ಅದರಿಂದ ಆ ಇಂಗ್ಲಿಷ್ ಪದಗಳನ್ನು ಕನ್ನಡಕ್ಕೆ ಅನುವಾದಿಸಿ ಹೇಳುವ ಅಗತ್ಯ ಇಲ್ಲ.

ಖಾಸಗಿ ಕನ್ನಡ ಟಿ.ವಿ ವಾಹಿನಿಗಳು ಕನ್ನಡ ಭಾಷೆಯನ್ನು ಬಹಳಷ್ಟು ಕುಲಗೆಡಿಸುತ್ತಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಸೊಗಸಾದ ಕನ್ನಡ ಪದಗಳು ಜನಪದರ ಬದುಕಿನ ಅವಿಭಾಜ್ಯ ಅಂಗವಾಗಿ ಬಳಕೆಯಾಗುತ್ತಿದ್ದರೂ ಅವುಗಳನ್ನು ಬಿಟ್ಟು ಇಂಗ್ಲಿಷ್‍ನಲ್ಲಿ ಹೇಳುವ ಅಗತ್ಯ ಇಲ್ಲ. ಉದಾಹರಣೆಗೆ, ಡೋಂಟ್‍ಕೇರ್‌ಗೆ ಬದಲು ಪಾಲಿಸುತ್ತಿಲ್ಲ, ನೋ ಎಂಟ್ರಿಗೆ ಬದಲು ಪ್ರವೇಶವಿಲ್ಲ, ರಿಲೀಸ್‍ಗೆ ಬದಲು ಬಿಡುಗಡೆ ಎಂಬಂತಹ ಪದಗಳನ್ನು ಬಳಸುವುದು ಬಿಟ್ಟು, ಇಂಗ್ಲಿಷ್ ಪದಗಳನ್ನು ಅನಗತ್ಯವಾಗಿ ತಂದು ತುರುಕಲಾಗುತ್ತದೆ. ಟಿ.ವಿ ಮಾಧ್ಯಮದವರ ಇಂತಹ ಭಾಷಾ ದಾರಿದ್ರ್ಯವನ್ನು ನಾವು ಖಂಡಿಸಬೇಕಾಗಿದೆ.

ADVERTISEMENT

-ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.