ADVERTISEMENT

ವಾಚಕರ ವಾಣಿ: ಕಠಿಣ ನಿರ್ಬಂಧ ಅಗತ್ಯವೇ?

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 17:46 IST
Last Updated 23 ಫೆಬ್ರುವರಿ 2021, 17:46 IST

ಕೇರಳದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ನೀಡಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಕೇರಳದಿಂದ ರಾಜ್ಯಕ್ಕೆ ಬರುವವರಿಗೆ ತರಾತುರಿಯಿಂದ ಕೆಲವು ನಿರ್ಬಂಧಗಳನ್ನು ಹೇರಿದೆ. ತುಳುನಾಡಿನ ಅವಿಭಾಜ್ಯ ಪ್ರದೇಶವಾದ ಕಾಸರಗೋಡಿನ ಗಡಿ ಪ್ರದೇಶದ ಲಕ್ಷಾಂತರ ಜನ ಇದರಿಂದ ತಲ್ಲಣಿಸಿದ್ದಾರೆ. ಇಂತಹ ನಿರ್ಣಯವನ್ನು ವೈರಾಣು ವೈದ್ಯಕೀಯ ತಜ್ಞರ ಅಭಿಪ್ರಾಯ ಪಡೆದು ಪುನರ್‌ಪರಿಶೀಲಿಸುವುದು ಒಳ್ಳೆಯದು.

ಸೀಮಿತ ಜನಸಂಖ್ಯೆಯ ಮುಂದುವರಿದ ನಾಗರಿಕ ಸಮಾಜದ ಪಾಶ್ಚಾತ್ಯ ರಾಷ್ಟ್ರಗಳ ಕೊರೊನಾ ನಿಯಮಾವಳಿಗಳನ್ನು ಭಾರತದಂತಹ ದೇಶದಲ್ಲಿ ಕಣ್ಮುಚ್ಚಿ ಅಳವಡಿಸುವುದು ಸಾಧುವಲ್ಲ. ಐಸೊಲೇಶನ್‌ನ ಏಕಾಂಗಿತನ, ಪ್ರಯೋಗಾರ್ಥವಾಗಿ ನೀಡಿದ ಔಷಧಗಳ ಅಡ್ಡಪರಿಣಾಮ, ರೋಗಿಗೆ ಮೊದಲೇ ಇದ್ದ ಗಂಭೀರ ಸ್ವರೂಪದ ಕಾಯಿಲೆಗಳ ಕಡೆಗಣನೆಯೇ ಮೊದಲಾದ ಕಾರಣಗಳಿಂದ ಶೇಕಡ ಒಂದಕ್ಕಿಂತಲೂ ಕಡಿಮೆ ಮಾರಣಾಂತಿಕತೆಯನ್ನು ಈವರೆಗೆ ದಾಖಲಿಸಿದ ಕೋವಿಡ್‌ ವ್ಯಾಧಿಗೆ ಈ ಪರಿಯ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಸಾಧುವಲ್ಲ. ಕೋವಿಡ್‌ ನಿಯಂತ್ರಣಕ್ಕೆ ಭಾರತೀಯ ಲಸಿಕೆ ಇರುವಾಗ, ಮನೆಯಲ್ಲಿ ಇದ್ದುಕೊಂಡೇ ತೆಗೆದುಕೊಳ್ಳುವ ಸಾಮಾನ್ಯ ಔಷಧಗಳಿಂದಲೇ ಹೆಚ್ಚಿನ ಕೊರೊನಾ ಸೋಂಕಿತ ರೋಗಿಗಳು ಗುಣಮುಖರಾಗುತ್ತಿರುವಾಗ ಕಠಿಣ ಕ್ರಮಗಳು ಜನಾಕ್ರೋಶಕ್ಕೆ ಕಾರಣವಾಗುತ್ತವೆ.

ಈ ಹಿಂದೆ ಲಾಕ್‌ಡೌನ್‌ ಕಾರಣದಿಂದ ಕುಸಿತ ಕಂಡ ಆರ್ಥಿಕತೆಯನ್ನು ಸರಿದೂಗಿಸುವ ಸರ್ಕಾರದ ಪ್ರಯತ್ನದ ಪರಿಣಾಮವಾದ ಬೆಲೆ ಏರಿಕೆಯ ಬಿಸಿಯನ್ನು ಜನ ಅನುಭವಿಸುತ್ತಿದ್ದಾರೆ. ಇದನ್ನು ನಿರ್ಲಕ್ಷಿಸಿ ಆತುರದ ನಿರ್ಧಾರಗಳನ್ನು ಕೈಗೊಂಡರೆ ಜನರ ಬದುಕು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತದೆ.‌

ADVERTISEMENT

-ಡಾ. ರಾಮಚಂದ್ರ ಕೆ.,ಕನ್ಯಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.