ಕೊರೊನಾದ ಎರಡನೇ ಅಲೆ ಈಗ ಸದ್ದಿಲ್ಲದೇ ಹಳ್ಳಿಗಳ ಕಡೆ ದಾಪುಗಾಲಿಡುತ್ತಿದೆ. ಆದರೂ ಹಳ್ಳಿಗರು ಇದರ ಪರಿವೆಯೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಕೆಲವೆಡೆ ಮಳೆಯಾಗಿದೆ. ಆ ಸಂತಸದಲ್ಲಿ ಕೋವಿಡ್ ನಿಯಮಗಳನ್ನು ಅನುಸರಿಸದೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಕೆಲವು ಹಳ್ಳಿಗಳಲ್ಲಿ ಆರೋಗ್ಯ ಇಲಾಖೆ ಹಾಗೂ ಪಂಚಾಯಿತಿ ಸಿಬ್ಬಂದಿಯೊಂದಿಗೆ ಜನರು ಸಹಕರಿಸುತ್ತಿಲ್ಲ ಎಂಬ ದೂರು ಇದೆ. ಹಳ್ಳಿಯಿಂದ ಹಳ್ಳಿಗೆ ನಿರಾತಂಕವಾಗಿ ಓಡಾಡುತ್ತಿರುವ ಜನ, ಸಣ್ಣ ಪುಟ್ಟ ಕೆಲಸಗಳಿಗೂ ಪ್ರತಿದಿನ ನಗರಗಳಿಗೆ ಹೋಗಿ ಬರುತ್ತಿದ್ದಾರೆ.
ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜ್ವರ, ಶೀತ, ಕೆಮ್ಮಿನ ಚಿಕಿತ್ಸೆಗಾಗಿ ಜನ ಕಿಕ್ಕಿರಿದು ಸೇರುತ್ತಿದ್ದಾರೆ. ಇವರ್ಯಾರಿಗೂ ಕೊರೊನಾ ಪರೀಕ್ಷೆ ನಡೆಯುತ್ತಿಲ್ಲ. ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅರಿವು ಮೂಡಿಸುವವರಿಲ್ಲ. ಲಸಿಕೆ ನೀಡಿಕೆಯು ಕುಂಟುತ್ತಾ ಸಾಗಿದೆ. ಹೀಗೇ ಮುಂದುವರಿದರೆ ಪರಿಸ್ಥಿತಿ ಹದಗೆಡುವ ಎಲ್ಲಾ ಸಾಧ್ಯತೆ ಇದೆ. ಜಿಲ್ಲಾ ಆಡಳಿತವು ಎಚ್ಚೆತ್ತುಕೊಳ್ಳಬೇಕು. ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಇಲ್ಲವಾದರೆ ಸೋಂಕಿನ ತೀವ್ರತೆ ಹೆಚ್ಚಾಗುವ ಸಂಭವವಿದೆ.
– ಶಿವಕುಮಾರ್ ಯರಗಟ್ಟಿಹಳ್ಳಿ,ಚನ್ನಗಿರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.