ಪ್ರಧಾನಿ ನರೇಂದ್ರ ಮೋದಿ ಅವರು ಕಾನ್ಪುರದಲ್ಲಿ ಗಂಗಾತೀರದ ಮೆಟ್ಟಿಲು ಏರುವಾಗ ಮುಗ್ಗರಿಸಿದ್ದು ತಮಾಷೆಯ ಸಂಗತಿ ಅಲ್ಲ.ನಾನು ನೋಡಿದ ಹಾಗೆ,ಬಹಳಷ್ಟು ಸರ್ಕಾರಿ ಕಟ್ಟಡಗಳಲ್ಲಿ, ಉದ್ಯಾನಗಳಲ್ಲಿ ಮೆಟ್ಟಿಲುಗಳ ಅಂತರ ಏಕರೂಪ ಇರುವುದಿಲ್ಲ.ಮೊದಲ ಅಥವಾ ಕೊನೆಯ ಮೆಟ್ಟಿಲು ಇತರ ಮೆಟ್ಟಿಲುಗಳಿಗಿಂತ ಎರಡು– ಮೂರು ಸೆಂಟಿಮೀಟರ್ ಹೆಚ್ಚೋ ಕಮ್ಮಿಯೋ ಇರುತ್ತದೆ.ಕೆಲವೊಮ್ಮೆ ಮುಗ್ಗರಿಸಬೇಕು ಅಥವಾ ಹೃದಯಕ್ಕೆ ಝಟ್ಕಾಹೊಡೆಸಿಕೊಳ್ಳಬೇಕು.
ಮೆಟ್ಟಿಲು ನಿರ್ಮಿಸುವ ಮುನ್ನ ನಿಖರ ಲೆಕ್ಕಾಚಾರ ಮಾಡುವಷ್ಟು ವ್ಯವಧಾನ ನಮ್ಮ ಸಿವಿಲ್ ಎಂಜಿನಿಯರ್ಗಳಿಗೆ, ಗುತ್ತಿಗೆದಾರರಿಗೆ ಇರುವುದಿಲ್ಲ ಯಾಕೊ? ಕಾನ್ಪುರದ ಮೆಟ್ಟಿಲನ್ನೇನೊ ಸರಿಮಾಡಲಿದ್ದಾರಂತೆ. ಮೋದಿಯವರ ಪಾದಸ್ಪರ್ಶದ ಅದೃಷ್ಟವಿಲ್ಲದ ಲಕ್ಷಾಂತರ ದೋಷಪೂರಿತ ಪಾವಟಿಗೆಗಳ ರಿಪೇರಿ ಸಾಧ್ಯವೇ ಇಲ್ಲವೇನೊ. ಕಡೇಪಕ್ಷ ಎಚ್ಚರಿಕೆ ಸೂಚಕ ಸಂಕೇತಗಳನ್ನಾದರೂ ಹಾಕಬಹುದು; ಮತ್ತೆ, ರಸ್ತೆಗುಂಡಿಗಳನ್ನು ಗುರುತಿಸುವ ಸ್ಪರ್ಧೆಯ ಮಾದರಿಯಲ್ಲಿ ಕೆಟ್ಟಮೆಟ್ಟಿಲ ಸ್ಪರ್ಧೆಯನ್ನೂ ಏರ್ಪಡಿಸಬಹುದು. ಅಂಥ ದೋಷಯುಕ್ತ ಮೆಟ್ಟಿಲನ್ನು ನಿರ್ಮಿಸುವವರಿಗೆ ಖಡಕ್ ಜುಲ್ಮಾನೆ ವಿಧಿಸುವಂತಾಗಬೇಕು. ಇಲ್ಲಾಂದರೆ ಅವಕ್ಕೆಲ್ಲ ‘ಮೋದಿ ಮೆಟ್ಟಿಲು’ ಎಂಬ ಅಪಕೀರ್ತಿ ಬಂದೀತು.
ನಾಗೇಶ ಹೆಗಡೆ,ಕೆಂಗೇರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.