ಹೊಸ ಕೋವಿಡ್ ಲಸಿಕೆ ನೀತಿಯು ಲಸಿಕೆ ನೀಡಿಕೆಯಲ್ಲಿನ ತಾರತಮ್ಯವನ್ನು ಸಂಪೂರ್ಣವಾಗಿ ತೊಡೆದುಹಾಕಿಲ್ಲ. ಕೇಂದ್ರ ಸರ್ಕಾರವೇ ಲಸಿಕೆ ಖರೀದಿಸಿ ಎಲ್ಲ ರಾಜ್ಯಗಳಿಗೂ ಸಮಾನವಾಗಿ ವಿತರಿಸಲು ಸಿದ್ಧವಾಗಿದೆ. ಆದರೆ ಅದು ಶೇ 75ರಷ್ಟು ಲಸಿಕೆಯನ್ನು ಮಾತ್ರ ಖರೀದಿಸಿ ಉಳಿದ ಶೇ 25ರಷ್ಟನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡಲು ಉತ್ಪಾದಕರಿಗೆ ಅನುವು ಮಾಡಿಕೊಟ್ಟಿದೆ.
ಭಾರತದಲ್ಲಿ ಉತ್ಪಾದನೆಯಾಗುವ ಅಷ್ಟೂ ಲಸಿಕೆಯನ್ನು ಪಡೆದರೂ ದೇಶದ ಎಲ್ಲಾ ಜನರಿಗೆ ಎರಡು ಡೋಸ್ ಲಸಿಕೆ ಹಾಕಿ, ಕೋವಿಡ್ನ ಮೂರನೇ ಅಲೆಯನ್ನು ಎದುರಿಸಲು ಸಾಧ್ಯವಾಗುವುದಿಲ್ಲ. ವಿದೇಶಗಳಿಂದ ಮತ್ತು ಇತರ ಉತ್ಪಾದನಾ ಕಂಪನಿಗಳಿಗೆ ಹೊಸ ಅನುಮತಿ ನೀಡಿ ಲಸಿಕೆಯನ್ನು ತಯಾರಿಸಬೇಕಾದ ಪರಿಸ್ಥಿತಿ ಇದೆ. ನಿಜಸ್ಥಿತಿ ಹೀಗಿರುವಾಗ ಶೇ 25ರಷ್ಟು ಲಸಿಕೆಯನ್ನು ಹೆಚ್ಚು ದರಕ್ಕೆ ಮಾರಾಟ ಮಾಡಲು ಲಸಿಕೆ ಉತ್ಪಾದನಾ ಕಂಪನಿಗಳಿಗೆ ಅವಕಾಶ ಮಾಡಿಕೊಡುವ ಲಸಿಕೆ ನೀತಿಯು ಜನರ ಜೀವರಕ್ಷಣೆಯ ದೃಷ್ಟಿಯಿಂದ ಒಳ್ಳೆಯದಲ್ಲ. ಜನರ ಜೀವರಕ್ಷಣೆ ಮೊದಲ ಆದ್ಯತೆಯಾಗಬೇಕು, ಕಂಪನಿಯ ಲಾಭ ತದನಂತರವಾಗಬೇಕು.
ಕೇಂದ್ರವು ಆ ನೆಲೆಯಲ್ಲಿ ತನ್ನ ಲಸಿಕೆ ನೀತಿಯನ್ನು ಬದಲಾಯಿಸಿ, ದೇಶದಲ್ಲಿ ಉತ್ಪಾನೆಯಾಗುವ ಎಲ್ಲ ಲಸಿಕೆಯನ್ನೂ ಸ್ವತಃ ಖರೀದಿಸಿ ಸಾರ್ವತ್ರಿಕವಾಗಿ ಎಲ್ಲರಿಗೂ ಉಚಿತ ಲಸಿಕೆ ನೀಡುವಂತಾಗಬೇಕು.
–ಟಿ.ಸುರೇಂದ್ರ ರಾವ್, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.