ADVERTISEMENT

ಮಾರಾಟಗಾರರ ಹಿತಾಸಕ್ತಿ ಮೇಲುಗೈ?

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 19:30 IST
Last Updated 8 ನವೆಂಬರ್ 2020, 19:30 IST

ಪಟಾಕಿ ಹೊಡೆಯುವುದನ್ನು ನಿಷೇಧಿಸುವುದಾಗಿ ಇತ್ತೀಚೆಗೆ ಬೆಳಿಗ್ಗೆ ಹೇಳಿ ಜನಮೆಚ್ಚುಗೆ ಗಳಿಸಿದ್ದ ಮುಖ್ಯಮಂತ್ರಿ, ಸಂಜೆಯಾಗುವುದರೊಳಗೆ ‘ಹಸಿರು ಪಟಾಕಿ’ ಸಿಡಿಸಲು ಅನುಮತಿ ನೀಡುವುದಾಗಿ ಘೋಷಿಸಿದ್ದಾರೆ. ಈ ಹಸಿರು ಪಟಾಕಿಯ ಸಿಡಿತದಿಂದ ಉಂಟಾಗುವ ವಾಯುಮಾಲಿನ್ಯ ಮಾಮೂಲು ಪಟಾಕಿಯದ್ದಕ್ಕಿಂತ ಪ್ರತಿಶತ ಕೇವಲ 30ರಷ್ಟು ಕಡಿಮೆ ಮತ್ತು ಈ ಮಾದರಿಯ ಪಟಾಕಿಗಳು ರಾಜ್ಯದ ಮಾರುಕಟ್ಚೆಗೆ ಬಂದಿಲ್ಲದಿರುವುದರಿಂದ ಅವುಗಳ ಬಗ್ಗೆ ನಿಖರವಾಗಿ ಏನನ್ನೂ ಹೇಳಲಾಗದು ಎಂಬುದು ತಜ್ಞರ ಅಭಿಮತ. ಜನರ ಆರೋಗ್ಯಕ್ಕಿಂತ ಪಟಾಕಿ ಸಿಡಿಸುವ ಮೋಜು ಮತ್ತು ಮಾರಾಟಗಾರರ ಹಿತಾಸಕ್ತಿಯೇ ಮೇಲುಗೈ ಪಡೆಯಬೇಕೇ?

ಕೋವಿಡ್ ಸಂದರ್ಭದಲ್ಲಿ ಎಲ್ಲ ಉದ್ಯಮದವರೂ ನಷ್ಟವನ್ನು ಅನುಭವಿಸಿದ್ದಾರೆ, ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪಟಾಕಿ ಮಾರಾಟಗಾರರು ಸರ್ಕಾರದ ಮೇಲೆ ಒತ್ತಡ ಹೇರದೆ ಪರಿಸ್ಥಿತಿಯನ್ನು ಅರಿತು ನಡೆಯುವುದೊಳಿತು. ಸರ್ಕಾರ ಸಹ, ಹಸಿರು ಪಟಾಕಿ ಹೆಸರಿನಲ್ಲಿ ಅವರ ಬೇಡಿಕೆಯನ್ನು ಮನ್ನಿಸದಿರುವುದು ಲೇಸು. ಇಷ್ಟಕ್ಕೂ ಕೇವಲ ಹಸಿರು ಪಟಾಕಿಯೇ ಮಾರಾಟವಾಗುತ್ತದೆ, ಸಾರ್ವಜನಿಕರೂ ಅವನ್ನೇ ಸಿಡಿಸುತ್ತಾರೆ ಎಂಬುದಕ್ಕೆ ಖಾತರಿಯೇನು? ಹಬ್ಬದ ಸಂಭ್ರಮದಲ್ಲಿ ಅದನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಲು ಮತ್ತು ಅಕ್ಷರಶಃ ಸೂಚನೆಗಳನ್ನು ಕಾರ್ಯಗತಗೊಳಿಸಲು ಪ್ರಾಯೋಗಿಕವಾಗಿ ಸಾಧ್ಯವೇ?

-ಪುಟ್ಟೇಗೌಡ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.