ಬೆಂಗಳೂರಿನಲ್ಲಿ ಹೆತ್ತ ತಂದೆಯನ್ನು ಮಗಳೇ ತನ್ನ ಪ್ರಿಯಕರನ ಜೊತೆ ಸೇರಿ ಬರ್ಬರವಾಗಿ ಹತ್ಯೆ ಮಾಡಿದ್ದಾಳೆ ಎನ್ನಲಾದ ಘಟನೆ ಸಮಾಜದ ಸ್ವಾಸ್ಥ್ಯವನ್ನು ಪ್ರಶ್ನಿಸುವಂತಿದೆ. ಬುದ್ಧಿವಾದ ಹೇಳಿದ ಮಾತ್ರಕ್ಕೆ ಅಪ್ಪನನ್ನೇ ಕೊಲೆ ಮಾಡುವ ಮನಃಸ್ಥಿತಿ ಇಂದಿನ ಮಕ್ಕಳಿಗೆ ಇದೆ ಎಂದಾದರೆ, ಮುಂದಿನ ಸುಸ್ಥಿರ ಸಮಾಜದ ನಿರ್ಮಾಣವಾದರೂ ಹೇಗೆ ಸಾಧ್ಯ? ಕೊಲೆಗೆ ಸಂಚು ರೂಪಿಸುವುದಕ್ಕೆ ಪ್ರೇರಣೆ ಸಿಕ್ಕಿದ್ದಾದರೂ ಹೇಗೆ? ಕೊಲೆಯಂತಹ ಪ್ರಕರಣಗಳನ್ನು ಎಳೆಎಳೆಯಾಗಿ ಬಿಚ್ಚಿಡುತ್ತಾ ಪದೇಪದೇ ಪ್ರಸಾರ ಮಾಡುತ್ತಲೇ ಇರುವ ಇಂದಿನ ನಮ್ಮ ವಿದ್ಯುನ್ಮಾನ ಮಾಧ್ಯಮಗಳು ಇದಕ್ಕೆ ನೇರ ಹೊಣೆಯಾಗುತ್ತವೆ.
ಯಾಂತ್ರಿಕ ಬದುಕಿನ ಹಿಂದೆ ಬಿಡುವಿಲ್ಲದಂತೆ ಸಾಗುತ್ತಿರುವ ಸಮಾಜದಲ್ಲಿ ಮಕ್ಕಳು ನೈತಿಕ ಮೌಲ್ಯಗಳ ಅರಿವಿಲ್ಲದಂತೆ ಬದುಕುತ್ತಿದ್ದಾರೆ. ಹಿರಿಯರಿಗೂ ಬದುಕಿನ ಮೌಲ್ಯಗಳ ಬಗ್ಗೆ ಅರಿವಿಲ್ಲದಂತಹ ಸ್ಥಿತಿ ಇದೆ. ಕೇವಲ ಸಂಪತ್ತಿನ ಮೌಲ್ಯಕ್ಕೆ ಕಟ್ಟುಬಿದ್ದಿದ್ದೇವೆ. ಮಕ್ಕಳಲ್ಲಿ ಬದುಕಿನ ಮೌಲ್ಯಗಳ ಬಿತ್ತನೆ ನಮ್ಮ ನಮ್ಮ ಮನೆಗಳಿಂದಲೇ ಆಗಬೇಕು. ಮಕ್ಕಳನ್ನು ಬೆಳೆಸುವ ರೀತಿ ಬದಲಾಗಬೇಕು. ಇಲ್ಲದಿದ್ದರೆ ಸುಸ್ಥಿರ ಸಮಾಜ ನಿರ್ಮಾಣ ಅಸಾಧ್ಯ.
–ಪದ್ಮಶ್ರೀ ಎಸ್.,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.