ಕರ್ನಾಟಕದ ನ್ಯಾಯಾಲಯಗಳು ಮಾದರಿಯಾಗಿರುವಂತೆ ಶ್ರಮಿಸುವುದಾಗಿ,ದೀನ ದಲಿತರಿಗೆ ನ್ಯಾಯಾಲಯವು ಎಟಕುವಂತೆ ಮಾಡುವುದಾಗಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಹೇಳಿದ್ದಾರೆ. ಯಾವ ವರ್ಗಕ್ಕೂ ಈಗ ನ್ಯಾಯಾಲಯ ಎಟುಕದ ಸ್ಥಳವಾಗಿಲ್ಲ. ಆದರೆ ಬಹಳಷ್ಟು ಜನ ಅವಶ್ಯಕತೆ ಇದ್ದರೂ ನ್ಯಾಯಾಲಯಕ್ಕೆ ಬರುವುದಿಲ್ಲ. ಕಾರಣ, ಅತಿ ವಿಳಂಬ ನ್ಯಾಯದಾನ. ಈ ಒಂದು ಸಮಸ್ಯೆಗೆ ಪರಿಹಾರ ದೊರೆತರೆ ಇದಕ್ಕಿಂತ ಇನ್ನೇನೂ ಬೇಕಿಲ್ಲ.
ಒಂದು ಪ್ರಕರಣವು ದಾಖಲಾದ 28 ವರ್ಷಗಳ ನಂತರ ಇತ್ತೀಚೆಗೆ ತೀರ್ಪು ಹೊರಬಿದ್ದಿದೆ. ನ್ಯಾಯದಾನ ಇಷ್ಟೊಂದು ವಿಳಂಬವಾಗುತ್ತಿರುವಾಗ, ಎಷ್ಟೋ ಪ್ರಕರಣಗಳಲ್ಲಿ ದಾವೆ ಹಾಕಿದವರು ಮೃತರಾಗಿರುವುದು ಗೊತ್ತಿರುವ ವಿಷಯ. ಈ ಸಮಸ್ಯೆಗೆ ಪರಿಹಾರ ಒದಗಬೇಕಾದರೆ, ನ್ಯಾಯಾಲಯಗಳು ಪ್ರಕರಣವನ್ನು ಆಲಿಸುವಾಗ ನಿಗದಿಪಡಿಸಬಹುದಾದ ದಿನಾಂಕ ಒಂದರಿಂದ ಇನ್ನೊಂದಕ್ಕೆ ಎಂಟು ದಿನಗಳನ್ನು ಮೀರದಂತೆ ಇರಬೇಕು. ಈ ಬಗ್ಗೆ ಸುಪ್ರೀಂ ಕೋರ್ಟ್ ಎಲ್ಲಾ ಕೋರ್ಟುಗಳಿಗೆ ನಿರ್ದೇಶನ ನೀಡುವುದಲ್ಲದೆ ತಾನೂ ಅದನ್ನು ಪಾಲಿಸಬೇಕು. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಹೆಚ್ಚಿನ ಅಂತರವಿರುವ ದಿನಾಂಕ ನಿಗದಿಪಡಿಸಲು ಅವಕಾಶ ಇರಬೇಕು. ವಿಳಂಬಿತ ನ್ಯಾಯವು ನಿರಾಕರಿಸಿದ ನ್ಯಾಯ ಎಂಬ ಮಾತು ಇತಿಹಾಸವಾಗಬೇಕು.
ಕೆ.ವಿ.ಸೀತಾರಾಮಯ್ಯ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.