ಕೇಂದ್ರ ಸಚಿವ ಅನಂತಕುಮಾರ್ ಅವರ ಅಕಾಲಿಕ ನಿಧನವು ನೋವು ತರುವಂಥದ್ದು. ದೂರದ ದುಶಾಂಬೆಯಲ್ಲಿ ಕುಳಿತು ‘ಪ್ರಜಾವಾಣಿ’ಯಲ್ಲಿ ಈ ವಾರ್ತೆಯನ್ನು ಓದಿದೆ. ಅದೇ ವೇಳೆ, ‘ಮಂಗಳೂರು ಮುಸ್ಲಿಮ್ಸ್’ ಎಂಬ ಫೇಸ್ಬುಕ್ ಪುಟದಲ್ಲಿ ಅನಂತಕುಮಾರ್ ಅವರ ಬಗ್ಗೆ ಅತ್ಯಂತ ಅವಹೇಳನಕಾರಿಯಾದ ಬರಹ ಪ್ರಕಟವಾಗಿರುವುದನ್ನು ಓದಿ ಇನ್ನಷ್ಟು ನೋವಾಯಿತು.
ಅನಂತಕುಮಾರ್ ಸ್ನೇಹಜೀವಿ, ಸಜ್ಜನ ರಾಜಕಾರಣಿಯಾಗಿದ್ದರು. ಇಲ್ಲವಾದರೆ ಆರು ಬಾರಿ ಸಂಸದರಾಗಿ ಆಯ್ಕೆಗೊಳ್ಳಲು ಸಾಧ್ಯವಿತ್ತೇ? ಅದನ್ನು ಮರೆತು ವ್ಯಕ್ತಿಯೊಬ್ಬರು ನಿಧನರಾದಾಗ ಅವರ ಜಾತಿಯನ್ನು ಬಳಸಿ ‘ನೀನು ಮತ್ತೆ ಹುಟ್ಟಿ ಬರಬೇಡ’ ಎಂದು ಬರೆಯುವುದು ಮನುಷ್ಯತ್ವ ಇಲ್ಲದ ಕ್ಷುದ್ರ ಅನಾಗರಿಕ ಮನಸ್ಸಿಗೆ ಮಾತ್ರ ಸಾಧ್ಯ.
ಕನ್ನಡಿಗರ ಬಗ್ಗೆ ನಾವು ಹೆಮ್ಮೆಪಡುವ ‘ಸಜ್ಜನಿಕೆ’ ರಾಜಕೀಯ, ಧರ್ಮದ ಹೆಸರಲ್ಲಿ ನಡೆಯುತ್ತಿರುವ ಜಿದ್ದಾಜಿದ್ದಿಗಳಲ್ಲಿ ಪಾತಾಳ ತಲುಪಿರುವುದನ್ನು ಕಂಡರೆ ಭವಿಷ್ಯದಲ್ಲಿ ಸಂಭವಿಸಬಹುದಾದ ಅತಿರೇಕಗಳ ಬಗ್ಗೆ ಭಯವಾಗುತ್ತದೆ. ಈಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಹಸಿಹಸಿ ಸುಳ್ಳುಗಳನ್ನು, ಅವಹೇಳನಕಾರಿ ಬರಹಗಳನ್ನು, ಆತಂಕಕಾರಿ ಚಿಂತನೆಗಳನ್ನು ಪ್ರಚುರಪಡಿಸಲು ಬಳಕೆಯಾಗುತ್ತಿರುವುದು ಅತ್ಯಂತ ಆಘಾತಕಾರಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.