ಕೃಷಿ ಸಚಿವ ಬಿ.ಸಿ.ಪಾಟೀಲ ಮತ್ತು ಅವರ ಪತ್ನಿಗೆ ವೈದ್ಯಕೀಯ ಸಿಬ್ಬಂದಿ ಅವರ ಮನೆಗೇ ತೆರಳಿ ಕೋವಿಡ್ ಲಸಿಕೆ ಹಾಕಿದ್ದಕ್ಕೆ ಹಿರೇಕೆರೂರು ತಾಲ್ಲೂಕು ಆರೋಗ್ಯಾಧಿಕಾರಿ (ಟಿ.ಎಚ್.ಒ) ಅವರನ್ನು ಅಮಾನತು ಮಾಡಲಾಗಿದೆ (ಪ್ರ.ವಾ., ಏ. 2). ಇದಕ್ಕೆ ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯ ಕಾರಣ ನೀಡಲಾಗಿದೆ. ಇದು ಎಷ್ಟರಮಟ್ಟಿಗೆ ಸರಿ? ಮನೆಗೆ ಕರೆಸಿಕೊಂಡು ಲಸಿಕೆ ಹಾಕಿಸಿಕೊಂಡ ಸಚಿವರಿಗೆ ಮಾರ್ಗಸೂಚಿ ಕುರಿತು ತಿಳಿದಿರಲಿಲ್ಲವೇ?
ಸಚಿವರು ಮನೆಗೆ ಕರೆದಾಗ ಯಾವುದೇ ಅಧಿಕಾರಿ ಹೋಗದೇ ಇದ್ದರೆ, ನೀರು ನೆರಳು ಇಲ್ಲದ ಜಾಗಕ್ಕೆ ಎತ್ತಂಗಡಿ ಆಗುವುದಿಲ್ಲವೇ? ಹಿಂದೆ ಸರ್ಕಾರಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಸಚಿವರಿಗೆ ಸರ್ಕಾರಿ ನೌಕರರ ಇಂತಹ ಸಂದಿಗ್ಧ ಸ್ಥಿತಿ ತಿಳಿಯಲಿಲ್ಲವೇ? ಈ ವಿಚಾರದಲ್ಲಿ ತಮ್ಮ ತಪ್ಪೂ ಇರುವುದರಿಂದ ಸಚಿವರು ಸಾರ್ವಜನಿಕವಾಗಿ ಕ್ಷಮೆ ಕೇಳಿ, ಟಿ.ಎಚ್.ಒ ಅಮಾನತನ್ನು ತಪ್ಪಿಸಬಹುದಿತ್ತಲ್ಲವೇ? ಒಟ್ಟಿನಲ್ಲಿ ಹಣ್ಣು ತಿಂದವ ತಪ್ಪಿಸಿಕೊಂಡ, ಸಿಪ್ಪೆ ತಿಂದವ ಸಿಗಾಕಿಕೊಂಡ ಅನ್ನುವ ಮಾತು ಈ ಪ್ರಕರಣಕ್ಕೆ ಚೆನ್ನಾಗಿ ಅನ್ವಯವಾಗುವಂತಿದೆ.
ವಿ.ತಿಪ್ಪೇಸ್ವಾಮಿ, ಹಿರಿಯೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.