ADVERTISEMENT

ವಿಕೃತ ಭಾಷೆ: ಕಾರಣ ಅರಿಯಬೇಕಿದೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2020, 19:45 IST
Last Updated 19 ಮಾರ್ಚ್ 2020, 19:45 IST

‘ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ವಿಕೃತ ಭಾಷೆಯ ಪರಿಣಾಮದ ಬಗ್ಗೆ ಚಿಂತಿಸಬೇಕಿದೆ’ ಎಂಬ ಕಳಕಳಿಯಿಂದ ಕೃಷ್ಣ ಪ್ರಸಾದ್ ಅವರು ಬರೆದಿರುವ ಲೇಖನ (ಪ್ರ.ವಾ., ಮಾರ್ಚ್‌ 16) ಓದುತ್ತಿದ್ದಂತೆಯೇ, ಪರಿಣಾಮದ ಜತೆಗೆ ಕಾರಣಗಳನ್ನೂ ತಿಳಿದುಕೊಳ್ಳಬೇಕಾದ ಅಗತ್ಯವಿದೆ ಎನಿಸಿತು. ಕೆಲವು ವರ್ಷಗಳಿಂದ ಸಾರ್ವಜನಿಕ ರಂಗದಲ್ಲಿರುವ ರಾಜಕಾರಣಿಗಳಲ್ಲಿ ಮತ್ತು ಜಾತಿ, ಧರ್ಮ, ದೇವರ ಹೆಸರಿನಲ್ಲಿ ಕಟ್ಟಿಕೊಂಡಿರುವ ಸಾಮಾಜಿಕ ಒಕ್ಕೂಟದ ಪದಾಧಿಕಾರಿಗಳಲ್ಲಿ ಹಲವರು ಯಾವುದೇ ಬಗೆಯ ನಾಚಿಕೆ, ಮುಜುಗರ, ಹೆದರಿಕೆ ಮತ್ತು ಹಿಂಜರಿಕೆಯಿಲ್ಲದೆ ತಮ್ಮ ಎದುರಾಳಿಗಳನ್ನು ಗುಂಡಿಕ್ಕಿ ಕೊಲ್ಲುವ, ಕೈಕಾಲು ಮುರಿಯುವ ಬೆದರಿಕೆಯ ನುಡಿಗಳನ್ನು ಮತ್ತು ಎದುರಾಳಿಗಳ ವ್ಯಕ್ತಿತ್ವವನ್ನೇ ಅಲ್ಲಗಳೆಯುವ ಬೈಗುಳದ ಮಾತುಗಳನ್ನು ಆಡತೊಡಗಿದ್ದಾರೆ. ಇದಕ್ಕೆ ಕಾರಣವೇನೆಂದರೆ, ರಾಜಕೀಯವಾಗಿ ದೊರೆಯುವ ಅಧಿಕಾರ, ಸಂಪತ್ತು. ಇವನ್ನು ಪಡೆಯಲು ಬೇಕಾಗುವ ಬಲಗಳೆಂದರೆ ಜಾತಿಬಲ, ಹಣಬಲ ಮತ್ತು ತೋಳ್ಬಲ.

ಈ ಬಲಗಳ ಜತೆಗೆ ರಾಜಕೀಯ ಬಲವೂ ಸೇರಿದ್ದರೆ, ಸಂವಿಧಾನದತ್ತವಾಗಿ ಸ್ಥಾಪನೆಗೊಂಡಿರುವ ಕೆಲವು ಸಂಸ್ಥೆಗಳು ಅವರ ಕಣ್ಸನ್ನೆಗೆ ತಕ್ಕಂತೆ ನಡೆದುಕೊಳ್ಳುತ್ತವೆ. ಈ ರೀತಿ ನಾಲ್ಕೂ ಬಲಗಳನ್ನು ಹೊಂದಿರುವ ವ್ಯಕ್ತಿಗಳು ಸಾರ್ವಜನಿಕ ರಂಗದಲ್ಲಿ ಯಾವ ಎಗ್ಗೂ ಇಲ್ಲದೆ ಕೆಟ್ಟ ಭಾಷೆಯನ್ನು ಬಳಸುತ್ತಿದ್ದಾರೆ. ಯಾವುದೇ ಒಂದು ರಾಜ್ಯ ಇಲ್ಲವೇ ದೇಶದಲ್ಲಿ ಜನಸಮುದಾಯ ನೆಮ್ಮದಿಯಿಂದ ಬಾಳಬೇಕಾದರೆ ಜನರಲ್ಲಿ ಮಾನವೀಯ ಗುಣ, ಸಂವಿಧಾನಬದ್ಧ ನಿಯಮಗಳಿಗೆ ಅನುಗುಣವಾಗಿ ನಡೆದು ಕೊಳ್ಳಬೇಕೆಂಬ ಎಚ್ಚರ ಇರಬೇಕು. ಎಲ್ಲಿ ಅದು ಇಲ್ಲವಾಗುತ್ತದೋ ಆಗ ಕೆಟ್ಟ ವರ್ತನೆ ಜತೆಗೆ ಕೆಟ್ಟ ಭಾಷೆಯೂ ಅಡೆತಡೆಯಿಲ್ಲದೆ ಬಳಕೆಯಾಗತೊಡಗುತ್ತದೆ.

ಸಿ.ಪಿ.ನಾಗರಾಜ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.