ADVERTISEMENT

ಆರ್ಥಿಕ ಸಮಸ್ಯೆ ಮತ್ತು ನ್ಯಾಯ

ಲಕ್ಷ್ಮೀಕಾಂತ್ ಎಲ್.ವಿ.
Published 5 ಏಪ್ರಿಲ್ 2019, 20:15 IST
Last Updated 5 ಏಪ್ರಿಲ್ 2019, 20:15 IST

‘ಮೌಲ್ಯಮಾಪನ ಎಂಬ ಮಹತ್ತರ ಕಲಿಕೆ’ ಎಂಬ ಗುರುರಾಜ್ ಎಸ್. ದಾವಣಗೆರೆ ಅವರ ಲೇಖನ (ಸಂಗತ, ಏ.5) ಬಹಳಷ್ಟು ವಿಷಯಗಳ ಸಾರವನ್ನು ಒಳಗೊಂಡಿದೆ. ಪ್ರಸ್ತುತ ಶೈಕ್ಷಣಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗುವ ಉಪನ್ಯಾಸಕರ ಜವಾಬ್ದಾರಿಯನ್ನು ಪರೀಕ್ಷಿಸುವ ಗಂಭೀರ ವಿಷಯ ಇದು. ವಿದ್ಯಾರ್ಥಿಗೆ ಪಡೆಯುವ ಅಂಕದ ಚಿಂತೆಯಾದರೆ, ಉಪನ್ಯಾಸಕನಿಗೆ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಬಹಳ ಜವಾಬ್ದಾರಿಯುತವಾಗಿ ಮಾಡಬೇಕಾದ ಒತ್ತಡ.

ಲೇಖಕರು ಹೇಳಿರುವಂತೆ, ಕೆಲವು ಉಪನ್ಯಾಸಕರು ಅತ್ಯಂತ ಉದಾಸೀನದಿಂದ ಮೌಲ್ಯಮಾಪನ ಮಾಡಿ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡಿದ ಉದಾಹರಣೆಗಳಿವೆ.

ಒಂದು ವೇಳೆ ಕಡಿಮೆ ಅಂಕ ಬಂದರೆ, ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿ ನ್ಯಾಯ ಪಡೆಯುವ ಅವಕಾಶವೇನೋ ಇದೆ. ಆದರೆ ಅದಕ್ಕೆ ಅರ್ಜಿ ಸಲ್ಲಿಸಲು ಬೇಕಾದ ಹಣವನ್ನೂ ಹೊಂದಿಸಲು ಸಾಧ್ಯವಾಗದಂತಹವರೂ ನಮ್ಮಲ್ಲಿ ಇದ್ದಾರೆ. ಅಂತಹವರು ಏನು ಮಾಡಬೇಕು? ತಮಗೆ ಅನ್ಯಾಯವಾಗಿದ್ದರೂ ಸಹಿಸಿಕೊಂಡೇ ಸುಮ್ಮನಿರಬೇಕಾಗುತ್ತದೆ. ಹಾಗೆಯೇ ಸ್ನಾತಕೋತ್ತರ ಪರೀಕ್ಷೆಗಳ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಕೆಲವು ವಿಶ್ವವಿದ್ಯಾಲಯಗಳಲ್ಲಿ ಅವಕಾಶವೇ ಇಲ್ಲ. ಉದಾಸೀನದ ಮೌಲ್ಯಮಾಪನದಿಂದಾಗಿ ಕಡಿಮೆ ಅಂಕ ಬಂದರೆ ಅಥವಾ ಅನುತ್ತೀರ್ಣವಾದರೆ ಅಂತಹ ವಿದ್ಯಾರ್ಥಿಯ ಪಾಡೇನು? ಅಂತಹವರು ನ್ಯಾಯಕ್ಕಾಗಿ ಅಲೆದಾಡಿ ಬಳಲಿ ಕೊನೆಗೆ ಸುಮ್ಮನಾಗಬಹುದು ಅಥವಾ ಖಿನ್ನತೆಯಿಂದ ದುಡುಕಿನ ನಿರ್ಧಾರ ತೆಗೆದುಕೊಳ್ಳಬಹುದು. ಇಂತಹ ಸ್ಥಿತಿಗೆ ಯಾರನ್ನು ಹೊಣೆ ಮಾಡುವುದು?ಹಾಗೆಂದ ಮಾತ್ರಕ್ಕೆ ಉಪನ್ಯಾಸಕರಿಗೆ ಸಮಸ್ಯೆಗಳಿಲ್ಲ ಎಂದೇನಿಲ್ಲ. ಆದರೆ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಕಟ್ಟುವ ಗುರುವಿನ ಸ್ಥಾನದಲ್ಲಿ ಇರುವವರು ತಾಳ್ಮೆ, ಸಹನೆ, ಜವಾಬ್ದಾರಿಯಿಂದ ಇರಬೇಕು.

ADVERTISEMENT

- ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.