ಅತಿವೃಷ್ಟಿಯಿಂದ ಭೂಕುಸಿತ ಉಂಟಾಗಿ ತೋಟ ನಾಶವಾದ ಕಾರಣ, ಕಳಸದ ಕಾರಗದ್ದೆಯ ಕೃಷಿಕ ಚನ್ನಪ್ಪಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ (ಪ್ರ.ವಾ., ಸೆ. 15). ಒಬ್ಬ ರೈತನ ಮಗಳಾದ ನನಗೆ ಈ ಸುದ್ದಿಯನ್ನು ಓದುವಾಗ ಸಹಜವಾಗಿಯೇ ಕಣ್ಣಲ್ಲಿ ನೀರಾಡಿತು. ಕಾರಣ, ಅವರು ನನ್ನ ತಂದೆಯಂತಲ್ಲವೇ ಎಂಬ ಭಾವ ಒಂದೆಡೆಯಾದರೆ, ಇನ್ನೊಂದೆಡೆ ಆತಂಕ. ಇದು ನನ್ನೊಬ್ಬಳ ಅತಂಕವಲ್ಲ ಮತ್ತು ಒಬ್ಬ ರೈತನ ಸಮಸ್ಯೆಯಲ್ಲ. ನನ್ನಂತಹ ಹಲವಾರು ಮಕ್ಕಳು ಮತ್ತು ಹಲವಾರು ರೈತರು ಇಂತಹ ಸಮಸ್ಯೆ ಎದುರಿಸುತ್ತಿದ್ದಾರೆ. ಕೃಷಿಯನ್ನು ಮೆಚ್ಚಿಕೊಂಡಿರುವ, ತಂದೆ ತಾಯಿಯನ್ನು ಹೊಂದಿರುವ ಎಷ್ಟೋ ಮಕ್ಕಳ ಸ್ಥಿತಿ ಇದಾಗಿದೆ. ಅಕಾಲಿಕ ಮಳೆ, ಸರ್ಕಾರದ ನಿರ್ಲಕ್ಷ್ಯ, ಪ್ರವಾಹ, ಸಾಲ ಮುಂತಾದವುಗಳಿಂದ ಅವರು ಹೇಗೆ ಪರಿತಪಿಸುತ್ತಾರೆ ಎಂಬುದನ್ನು ಹತ್ತಿರದಿಂದ ಕಾಣುವವರು ನಾವು. ಇತ್ತೀಚಿನ ಪ್ರವಾಹದ ನಂತರ ಜನರ ಸ್ಥಿತಿಗತಿ ಬಗ್ಗೆ ಸರ್ಕಾರ ಕಾಳಜಿ ವಹಿಸಿ ಸೂಕ್ತ ಪರಿಹಾರ ನೀಡಲಿಲ್ಲ. ಅಧಿಕಾರಕ್ಕಾಗಿ ಕಚ್ಚಾಡುವ ಇವರಿಗೆ ರೈತರ ಕಷ್ಟವೆಲ್ಲಿ ಅರ್ಥವಾಗಬೇಕು?
ಬಹುಶಃ ಈ ರೈತ, ಸರ್ಕಾರದ ಮೇಲಿನ ಭರವಸೆ ಕಳೆದುಕೊಂಡಂತಿದೆ. ದೇಶದ ಬೆನ್ನೆಲುಬೆಂದು ಬಿಂಬಿಸಲಾಗುವ ರೈತನ ಬೆನ್ನೆಲುಬನ್ನೇ ಇಂದು ಮುರಿಯಲಾಗುತ್ತಿದೆ. ಕೇವಲ ಪರಿಹಾರದ ಮೂಲಕವಷ್ಟೇ ರೈತರ ಆತ್ಮಹತ್ಯೆಗಳನ್ನು ತಡೆಯಲಾಗದು. ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕು.
– ಶ್ವೇತಾ ಎನ್.,ಶಿವಮೊಗ್ಗ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.