ನೂರಾರು ವರ್ಷಗಳ ಕಾಲ ನಮ್ಮ ಸಮುದಾಯಗಳು ಆಹಾರ ಪದ್ಧತಿಯ ಕುರಿತು ಕಟ್ಟಿಕೊಂಡ ಅನುಭಾವಿಕ ತಾತ್ವಿಕತೆಯನ್ನು ಬೀದಿಯಲ್ಲಿ ‘ಮಾಂಸ ಮಾರುವಲ್ಲಿಗೆ’ ಇಳಿಸಲಾಯಿತು! ಮನುಷ್ಯ ಮೂಲತಃ ಮಾಂಸಾಹಾರಿ. ನಾಗರಿಕತೆ ಆರಂಭವಾಗಿದ್ದೇ ‘ಬೇಟೆ ಮತ್ತು ಸಂಗ್ರಹಕಾರರ’ ಘಟ್ಟದಿಂದ. ನಂತರ ಸಂಸ್ಕೃತಿಗಳ ನಡುವಿನ ವೈವಿಧ್ಯಗಳ ಉಗಮದ ಕಾರಣಕ್ಕೆ ಕೆಲವು ಸಮುದಾಯಗಳು ಸಸ್ಯಾಹಾರಕ್ಕೆ ಸೀಮಿತಗೊಂಡವು. ಆದರೆ ಎಂದಿಗೂ ಮನುಷ್ಯ ತಾನು ತಿನ್ನುವ ಆಹಾರವನ್ನು ‘ಬೀದಿ ರಾಜಕೀಯ’ದ ಭಾಗ ಮಾಡಿಕೊಂಡಿರಲಿಲ್ಲ.
ನಾವು ಚಿಕ್ಕವರಿದ್ದಾಗ ಮನೆಯಲ್ಲಿ ಮಾಂಸಾಹಾರ ಮಾಡಿದ್ದರೆ ಪಕ್ಕದ ಮನೆಯ ಸಸ್ಯಾಹಾರಿಗಳು ಏನು ಅಡುಗೆ ಎಂದು ಕೇಳಿದಾಗ, ಆಲೂಗಡ್ಡೆ ಸಾರು ಅಂತ ಹೇಳು ಎಂದು ಹೇಳಿಕೊಡುತ್ತಿದ್ದರು. ಇದರ ಹಿಂದೆ, ಎದುರಿಗಿರುವ ವ್ಯಕ್ತಿಯ ಆಹಾರ ಪದ್ಧತಿಯನ್ನು ಗೌರವಿಸುವ ಸೂಕ್ಷ್ಮತೆ ಇತ್ತು. ಆಹಾರದ ಕುರಿತ ಶ್ರೇಷ್ಠ, ಕನಿಷ್ಠ ನಿರೂಪಣೆಗಳ ಆಚೆಗೆ ಸಮುದಾಯವೇ ಕಟ್ಟಿಕೊಂಡ ಸೂಕ್ಷ್ಮತೆಯೊಂದು ನಮ್ಮ ನೆರೆಹೊರೆಯಲ್ಲಿ ಅಸ್ತಿತ್ವದಲ್ಲಿತ್ತು. ಆದರೆ ಇಂದು ಕೆಲವು ಗುಂಪುಗಳ ‘ಜನಾಂಗೀಯ ನಂಜಿಗೆ’ ದೃಶ್ಯ ಮಾಧ್ಯಮಗಳ ಪರದೆ ಪೂರ ಮಾಂಸವೇ ತುಂಬಿಕೊಂಡಿದೆ! ‘ರಾಜಕೀಯ ಹಿಂದುತ್ವ’ದ ಮಿತಿಯನ್ನು ಇನ್ನಾದರೂ ಜನರು ಗುರುತಿಸಿಕೊಳ್ಳದಿದ್ದರೆ ಇವರು ಜಾಗತಿಕ ಮಟ್ಟದಲ್ಲಿ ನಮ್ಮ ದೇಶದ ಜನಬದುಕು, ಪರಂಪರೆಯನ್ನು ಮುಜುಗರಕ್ಕೆ ಒಡ್ಡುತ್ತಾರೆ ಅಷ್ಟೆ.
- ಕಿರಣ್ ಎಂ. ಗಾಜನೂರು,ಕಲಬುರಗಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.