ಕಳೆದ ವಾರಾಂತ್ಯದಲ್ಲಿ ಅರಣ್ಯ ಇಲಾಖೆಯ ವತಿಯಿಂದ ಸಾಗರ ಸನಿಹದ ‘ಮುಪ್ಪಾನೆ ಪ್ರಕೃತಿ ಶಿಬಿರ’ದಲ್ಲಿ ದೇಶದ ಪ್ರಥಮ ‘ಕಪ್ಪೆಹಬ್ಬ’ವನ್ನು ಅದ್ಧೂರಿಯಾಗಿ ಆಚರಿಸಲಾಯಿತು ಎಂದು ವರದಿಯಾಗಿದೆ (ಪ್ರ.ವಾ., ಡಿ. 20). ಅಚ್ಚರಿಯೆಂದರೆ, ಈ ಕಾರ್ಯಕ್ರಮಗಳಿಗೆ ಕೇವಲ ಅಂತರ್ಜಾಲದಲ್ಲಿ ಪ್ರವೇಶ ಪಡೆದವರಿಗಷ್ಟೇ ಅವಕಾಶ ನೀಡಲಾಗಿತ್ತು! ಸ್ಥಳೀಯರು, ಪರಿಸರಪ್ರಿಯರು ಭಾಗವಹಿಸುವುದಕ್ಕೆ ನಿರ್ಬಂಧವಿತ್ತು. ಸ್ಥಳೀಯರಿಗೇ ಅವಕಾಶವಿಲ್ಲವಾದರೆ ಅದನ್ನು ಬೆಂಗಳೂರಿನ ಕಾಂಕ್ರೀಟ್ ಕಾಡಿನಲ್ಲಿಯೇ ಮಾಡಬಹುದಿತ್ತು. ಅಷ್ಟು ದೂರದ ಸಾಗರದಲ್ಲಿ ಆಯೋಜಿಸುವ ಅವಶ್ಯಕತೆಯೇ ಇರಲಿಲ್ಲ. ಸ್ಥಳೀಯರನ್ನು ಅವಗಣಿಸುವುದರಿಂದಲೇ ಅರಣ್ಯ ಇಲಾಖೆಯ ಯೋಜನೆಗಳು ಸಂಪೂರ್ಣ ಯಶಸ್ಸು ಪಡೆಯುವುದಿಲ್ಲ.
ಜನಸಾಮಾನ್ಯರ ಸಹಭಾಗಿತ್ವ ಇಲ್ಲದ, ಪ್ರಾಯೋಗಿಕವಲ್ಲದ ಯೋಜನೆಗಳು ಅನಗತ್ಯ ಖರ್ಚುವೆಚ್ಚಗಳಿಗೆ ದಾರಿಯಾಗಬಲ್ಲವೇ ವಿನಾ ನಿಗದಿತ ಗುರಿಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಮುಂದಿನ ದಿನಗಳಲ್ಲಾದರೂ ಸಂಬಂಧಿತ ಅಧಿಕಾರಿಗಳು ಇಂತಹ ಕಾರ್ಯಕ್ರಮಗಳನ್ನು ರೂಪಿಸುವ ಮುನ್ನ ಸಮುದಾಯವನ್ನೂ ಆದ್ಯತೆಯ ಮೇಲೆ ಪರಿಗಣಿಸುವ ನಿಟ್ಟಿನಲ್ಲಿ ಯೋಚಿಸಲಿ.
-ಡಾ. ಚನ್ನು ಅ. ಹಿರೇಮಠ, ರಾಣೆಬೆನ್ನೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.