‘ದೇಶದ ಬ್ಯಾಂಕುಗಳಿಂದ ನಾನು ಪಡೆದಿರುವ ಎಲ್ಲ ಸಾಲವನ್ನೂ ತೀರಿಸುತ್ತೇನೆ. ದೇಶವೇ ಕೊರೊನಾ ಸೋಂಕಿನಿಂದ ತತ್ತರಿಸಿ, ಅದರ ವಿರುದ್ಧ ಹೋರಾಡುತ್ತಿರುವ ಇಂತಹ ಸಮಯದಲ್ಲಾದರೂ ನನ್ನ ಮನವಿಯನ್ನು ಪುರಸ್ಕರಿಸಿ’ ಎಂದು ಹಣಕಾಸು ಸಚಿವರಿಗೆ ಉದ್ಯಮಿ ವಿಜಯ್ ಮಲ್ಯ ಮನವಿ ಮಾಡಿದ್ದಾರೆ (ಪ್ರ.ವಾ., ಏ. 1). ಮಲ್ಯ ಈ ರೀತಿ ಹಲವು ಬಾರಿ ಮನವಿ ಮಾಡಿದ್ದರೂ ಜಾರಿ ನಿರ್ದೇಶನಾಲಯವೂ ಕೇಳುತ್ತಿಲ್ಲ, ಸರ್ಕಾರವೂ ಪುರಸ್ಕರಿಸಿಲ್ಲ. ಅವರು ಪಡೆದಿರುವ ₹ 9,000 ಕೋಟಿ ಸಾಲವು ಸಣ್ಣ ಮೊತ್ತವಲ್ಲ. ಇನ್ನು ಈ ಸಂಬಂಧ ವಿಚಾರಣೆ ನಡೆದು ನ್ಯಾಯಾಲಯದ ತೀರ್ಪು ಬರುವುದೆಂದೋ?
ಕೇಂದ್ರ ಸರ್ಕಾರವು ದಿಟ್ಟ ನಿರ್ಧಾರ ಕೈಗೊಂಡು, ಸಾಲ ತೀರುವಳಿಗೆ ಮಲ್ಯ ಅವರಿಗೊಂದು ಅವಕಾಶ ಕೊಡಲಿ. ಇದರಿಂದ, ತಲೆಮರೆಸಿಕೊಂಡು ವಿದೇಶದಲ್ಲಿರುವ ಇತರ ಸಾಲಗಾರರೂ ಮರುಪಾವತಿಗೆ ಮುಂದೆ ಬರಬಹುದು.
-ನಿಖಿತಾ ಗುರುದೇವ್ ಭಂಡಾರ್ಕರ್, ಹೊಸನಗರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.