ADVERTISEMENT

ಚಿರತೆ ಜೀವಕ್ಕೆ ಇರಲಿ ಆದ್ಯತೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2020, 21:20 IST
Last Updated 23 ಡಿಸೆಂಬರ್ 2020, 21:20 IST

ಭಾರತದಲ್ಲಿ ಚಿರತೆಗಳ ಸಂಖ್ಯೆಯಲ್ಲಿ ಏರಿಕೆಯಾಗಿರುವುದು (ಪ್ರ.ವಾ.‌, ಡಿ. 23) ಸಹಜವಾಗಿ ಖುಷಿ ತಂದಿದೆ. ಆದರೆ ಅವುಗಳ ಸಂಖ್ಯೆಗೆ ಅನುಗುಣವಾಗಿ ಮಾನವ– ವನ್ಯಜೀವಿ ಸಂಘರ್ಷವೂ ಹೆಚ್ಚಾಗುತ್ತದೆ ಎನ್ನುವುದನ್ನು ಮರೆಯುವಂತಿಲ್ಲ. ಏಕೆಂದರೆ‌ ಹುಲಿಗಳಂತೆ ಕಾಡಿನಲ್ಲಿ ಅಷ್ಟೇ ವಾಸಿಸುವ ಜಾಯಮಾನ ಚಿರತೆಯದ್ದಲ್ಲ. ಅದು ಹೆಚ್ಚಾಗಿ ಜನರ ವಾಸಸ್ಥಾನಗಳ ಬಳಿ ವಾಸಿಸುವ ಕುಶಾಗ್ರಮತಿ.‌ ಕುರುಚಲು ಕಾಡು, ಕಬ್ಬಿನ ಗದ್ದೆಗಳು, ಪುಟ್ಟ ಗುಡ್ಡಗಳ ಸುತ್ತಮುತ್ತಲಿನಲ್ಲೂ ಅನಾಯಾಸವಾಗಿ ಬದುಕುಳಿಯಬಲ್ಲ ಮತ್ತು ಮನುಷ್ಯನ ಚಟುವಟಿಕೆಗಳು ಹೆಚ್ಚಿರುವ ಪ್ರದೇಶದಲ್ಲೂ ಆಹಾರ ಗಳಿಸಿಕೊಳ್ಳಬಲ್ಲ ಜೀವಿ.

ಕೆಲವೊಮ್ಮೆ ಚಿರತೆಗಳು ನರಹಂತಕಗಳಾಗಿ ಬದಲಾಗುವ ಸಂಭವವೂ‌ ಇರುತ್ತದೆ. ‌ಆದ್ದರಿಂದ ಹೆಚ್ಚುತ್ತಿರುವ ಚಿರತೆಗಳ‌ ಸಂಖ್ಯೆಗನುಗುಣವಾಗಿ ಅವು ನಿರ್ಭಯವಾಗಿ ಬದುಕುಳಿಯಲು ಅವಕಾಶವನ್ನು ನೀಡಬೇಕಿರುವುದು ಅವಶ್ಯಕ. ಈ‌ ದಿಸೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಚಿಂತಿಸಬೇಕಾಗಿದೆ. ಅರಣ್ಯದೊಳಗೆ ನಡೆಯುವ ‌ಅನಗತ್ಯ ಕಾಮಗಾರಿಗಳು, ಗಣಿಗಾರಿಕೆ, ರೆಸಾರ್ಟ್ ನಿರ್ಮಾಣದಂತಹ ಅಪಾಯಕಾರಿ ಕಾಮಗಾರಿಗಳನ್ನು ಸರ್ಕಾರಗಳು ತಡೆಯಲೇಬೇಕು. ಇಲ್ಲದಿದ್ದರೆ ಮಾನವ– ವನ್ಯಜೀವಿ ಸಂಘರ್ಷ ನಿರಂತರವಾಗಿ ನಡೆಯುತ್ತಲೇ ಇರುತ್ತದೆ.
-ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT