ವಿದ್ಯುತ್ ಸರಬರಾಜು ವ್ಯವಸ್ಥೆಯಲ್ಲಿ ‘ನಿರಂತರ ಜ್ಯೋತಿ’ ಯೋಜನೆ ಜಾರಿಯಾಗುವುದಕ್ಕೂ ಮೊದಲು ಕೃಷಿ ಪಂಪ್ಸೆಟ್ಗೆ ಹಾಗೂ ಗ್ರಾಮೀಣ ಜನವಸತಿ ಪ್ರದೇಶಗಳಿಗೆ ಏಕರೂಪದ ವಿದ್ಯುತ್ ವ್ಯವಸ್ಥೆ ಇತ್ತು. ನಿರಂತರ ಜ್ಯೋತಿ ಜಾರಿಯಾದಾಗಿನಿಂದ ಕೃಷಿ ಪಂಪ್ಸೆಟ್ಗೆ ನಿಗದಿತ ಅವಧಿಗೆ ಮೂರು ಫೇಸ್ ವಿದ್ಯುತ್ ಮಾತ್ರ ನೀಡಿ, ಜನವಸತಿ ಪ್ರದೇಶಗಳಿಗೆ ದಿನಪೂರ್ತಿ ವಿದ್ಯುತ್ ಪೂರೈಸಲಾಗುತ್ತಿದೆ.
ಬೇಸಿಗೆಯಲ್ಲಿ ಅಂತರ್ಜಲ ಸಂರಕ್ಷಣೆ ಹಾಗೂ ವಿದ್ಯುತ್ ಉಳಿತಾಯದ ದೃಷ್ಟಿಯಿಂದ ಈ ನಿರ್ಧಾರ ಸಮಂಜಸವೇ. ಆದರೆ, ರೈತರು ಸಮಯದ ಮಿತಿಯಿಲ್ಲದೆ ಕೆಲವೊಮ್ಮೆ ರಾತ್ರಿ ಹೊತ್ತೂ ಜಮೀನಿನಲ್ಲಿ ಕೆಲಸ ಮಾಡುವ ಅನಿವಾರ್ಯ ಇರುತ್ತದೆ. ಅಲ್ಲದೆ ಕೃಷಿ ಸಂಬಂಧಿತ ಬೆಲೆಬಾಳುವ ವಸ್ತುಗಳನ್ನು ಹಾಗೂ ದನಕರುಗಳನ್ನು ಕಾಯಲು ರಾತ್ರಿ ಹೊತ್ತು ಜಮೀನಿನಲ್ಲೇ ಕಾಲ ಕಳೆಯಬೇಕಾದ ಸಂದರ್ಭ ಇರುತ್ತದೆ. ಇನ್ನು ಕೆಲವೊಮ್ಮೆ ವನ್ಯಜೀವಿಗಳ ಹಾವಳಿಯಿಂದ ರಕ್ಷಿಸಿಕೊಳ್ಳಬೇಕಾಗುತ್ತದೆ. ಇಂತಹ ಸಮಯದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಬೆಳಕಿನ ವ್ಯವಸ್ಥೆ ಅತ್ಯವಶ್ಯಕ. ಸದ್ಯ ಕೃಷಿಗೆ ಮೂರು ಫೇಸ್ ವಿದ್ಯುತ್ ನೀಡುತ್ತಿರುವ ಆರೇಳು ಗಂಟೆ ಅವಧಿಯನ್ನು ಹೊರತುಪಡಿಸಿ, ರಾತ್ರಿ ವೇಳೆ ಕನಿಷ್ಠ ಒಂದು ಫೇಸ್ ವಿದ್ಯುತ್ ಆದರೂ ಪೂರೈಕೆಯಾಗುತ್ತಿಲ್ಲ.
ಇದರಿಂದ ಎಷ್ಟೋ ರೈತರು ರಾತ್ರಿ ಹೊತ್ತು ಬೆಳಕಿಲ್ಲದೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಸರ್ಕಾರ ಈಗ ಪೂರೈಸುತ್ತಿರುವ ಮೂರು ಫೇಸ್ ವಿದ್ಯುತ್ ಅವಧಿಯನ್ನು ಹೊರತುಪಡಿಸಿ, ಸಂಜೆ ಆರರಿಂದ ಬೆಳಿಗ್ಗೆ ಆರು ಗಂಟೆಯವರೆಗೆ ಕನಿಷ್ಠ ಒಂದು ಫೇಸ್ ವಿದ್ಯುತ್ ಪೂರೈಕೆ ಮಾಡಬೇಕು.ಇದರಿಂದ ಯಂತ್ರೋಪಕರಣಗಳನ್ನು ಹೊರತುಪಡಿಸಿ, ಕೇವಲ ವಿದ್ಯುತ್ ದೀಪಗಳನ್ನಾದರೂ ಹೊತ್ತಿಸಿಕೊಳ್ಳಲು ಸಾಧ್ಯವಾಗುತ್ತದೆ.
ಸೋಮಲಿಂಗಪ್ಪ ಬೆಣ್ಣಿಗುಳದಳ್ಳಿ, ಕೊಪ್ಪಳ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.