65ನೇ ಕರ್ನಾಟಕ ರಾಜ್ಯೋತ್ಸವದ ಹೊಸ್ತಿಲಲ್ಲಿ ನಿಂತು, ಕನ್ನಡ ಶಾಲೆಗಳ ಉಳಿವಿಗಾಗಿ ಇನ್ನೂ ಹೋರಾಟ ನಡೆಸುತ್ತಿರುವುದು ವಿಷಾದಕರ. ‘ಶತಮಾನದ ಶಾಲೆಗಳಿಗೆ ಶಕ್ತಿ ತುಂಬೋಣ’ ಎಂಬ ಜಿ.ಎಸ್.ಜಯದೇವ ಹಾಗೂ ಕೃಷ್ಣಮೂರ್ತಿ ಹನೂರು ಅವರ ಲೇಖನ (ಪ್ರ.ವಾ., ನ. 2) ನೋಡಿ, ಪ್ರಸ್ತುತ ಕಾಲಘಟ್ಟಕ್ಕೆ ಈ ನಡೆ ಅಗತ್ಯವೆನಿಸಿದರೂ ಕೇವಲ ಶತಮಾನದ ಶಾಲೆಗಳಿಗೆ ಎನ್ನುವುದಕ್ಕಿಂತ ‘ಸಕಲ ಕನ್ನಡ ಶಾಲೆಗಳಿಗೆ ಜೀವ ತುಂಬಿದರೆ’ ಕನ್ನಡವು ತಾಯ್ನಾಡಿನಲ್ಲಿ ಸ್ವಾವಲಂಬಿಯಾಗಿ ನೆಲೆ ನಿಲ್ಲುತ್ತದೆ ಎನಿಸುತ್ತದೆ.
ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಕೊಟ್ಟರೆ ಸಾಕು, ಅವರು ಮುಂದೆ ಕನ್ನಡವನ್ನು ಉಳಿಸಿ ಬೆಳೆಸುತ್ತಾರೆ ಎಂಬ ನಮ್ಮ ತಪ್ಪು ಕಲ್ಪನೆಯೇ ಇಂದಿನ ಈ ಸ್ಥಿತಿಗೆ ಕಾರಣ. ಕನ್ನಡ ಸದ್ಯದ ಸ್ಥಿತಿಯಲ್ಲಿ ಭಾಷೆ ಮಾತ್ರವಾಗಿ ಉಳಿದರೆ ಸಾಲದು. ಅದು ಆಧುನಿಕತೆಗೆ ತಕ್ಕಂತೆ, ಅದರಲ್ಲೂ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಅವಕಾಶಗಳೆಂಬ ಕವಲುಗಳಾಗಿ ಒಡೆದಾಗ ಮಾತ್ರವೇ ಕನ್ನಡಿಗರಲ್ಲದವರೂ ಕನ್ನಡಿಗರಾಗಲು ಸಾಧ್ಯ. ಕನ್ನಡಾಭಿಮಾನಿಗಳೆಂದು ಬೀಗುವ ನಾವೆಲ್ಲ ಕನ್ನಡವನ್ನು ಬೆಳೆಸಿ ಎಂದು ಅಂಗಲಾಚುವ ಬದಲು ‘ಬಳಸುವುದನ್ನು’ ಕಲಿಸಿದರೆ ಅದು ತಾನಾಗೇ ಬೆಳೆಯುತ್ತದೆ. ಈ ಸಾಮಾನ್ಯ ಅರಿವನ್ನಿಟ್ಟುಕೊಂಡು ಬಳಸುವ ಜಾಡು ಯಾವುದೆಂಬ ಯಕ್ಷ ಪ್ರಶ್ನೆಗೆ ಮೊದಲು ಉತ್ತರ ಕಂಡುಕೊಳ್ಳಬೇಕಿದೆ.
- ನಾಗರಾಜ್ ಗರಗ್,ಹೊಸದುರ್ಗ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.