ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಇದ್ದ ಹಣಕಾಸು ನಿರ್ವಹಣೆಯ ಅಧಿಕಾರವನ್ನು ಸರ್ಕಾರವು ಪಿಡಿಒ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಿಗೆ ನೀಡಲು ಮುಂದಾಗಿರುವುದು (ಪ್ರ.ವಾ., ಅ. 6) ವಿಕೇಂದ್ರೀಕರಣ ತತ್ವಕ್ಕೆ ನೀಡುತ್ತಿರುವ ಬಹುದೊಡ್ಡ ಪೆಟ್ಟಾಗಿದೆ. ಉದ್ದೇಶಿತ ಈ ಬದಲಾವಣೆಗೆ ನೀಡಿರುವ ಕಾರಣಗಳು ನಗೆ ಉಕ್ಕಿಸುತ್ತವೆ. ಬಿಲ್ ಪಾವತಿಗೆ ಲಂಚ ಪಡೆಯುವಾಗ ಗ್ರಾಮ ಪಂಚಾಯಿತಿಗಳ ಕೆಲವು ಅಧ್ಯಕ್ಷರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ಎಂಬುದೂ ಒಂದು ಕಾರಣವಂತೆ.
ಭ್ರಷ್ಟಾಚಾರದಲ್ಲಿ ಅಧ್ಯಕ್ಷ, ಸದಸ್ಯ, ಅಧಿಕಾರಿಗಳು ಈ ಎಲ್ಲರೂ ಪಾಲುದಾರರು. ಕಿಲಾಡಿಗಳು ಬಚಾವಾಗುತ್ತಾರೆ, ಕೆಲವರು ಸಿಕ್ಕಿಬೀಳುತ್ತಾರೆ. ಅಧ್ಯಕ್ಷರ ಅಧಿಕಾರಕ್ಕೆ ಕತ್ತರಿ ಹಾಕುವುದರಿಂದ ಭ್ರಷ್ಟಾಚಾರ ಕಡಿಮೆ ಆಗುವುದಿಲ್ಲ. ಅದು, ಬೇರೊಂದು ರೂಪದಲ್ಲಿ ಪ್ರತ್ಯಕ್ಷವಾಗುತ್ತದೆ. ಅದನ್ನು ನಿರ್ಮೂಲಗೊಳಿಸಲು ಇಚ್ಛಾಶಕ್ತಿ ಬೇಕು. ಪಂಚಾಯಿತಿ ವ್ಯವಸ್ಥೆಯನ್ನು ಬಲಪಡಿಸುವ ದಿಸೆಯಲ್ಲಿ ಸರ್ಕಾರ ಚಿಂತಿಸಬೇಕು. ಅದನ್ನು ಬಿಟ್ಟು, ಇರುವ ಅಧಿಕಾರವನ್ನು ಮೊಟಕುಗೊಳಿಸುವ ಷಡ್ಯಂತ್ರವನ್ನು ಒಪ್ಪಲಾಗದು.
→ಶಿವಕುಮಾರ್ ಯರಗಟ್ಟಿಹಳ್ಳಿ,ಚನ್ನಗಿರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.