ಸುಮಾರು 70, 80ರ ದಶಕದಲ್ಲಿ ಗುಂಡ್ಲುಪೇಟೆ ತಾಲ್ಲೂಕಿನ ಅಸ್ಮಿತೆಯಂತೆ, ಅಲ್ಲಿನ ಜನರಿಗೆ ಜೀವನದಿಯಂತೆ ಇದ್ದ ಗುಂಡ್ಲು ನದಿಯ ಹುಟ್ಟಿನ ಜಾಡು ಹಾಗೂ ಅದು ಹರಿದು ಬರುತ್ತಿದ್ದ ಮಾರ್ಗ ಇಂದು ಮಾನವರ ದುರಾಸೆಯ ಫಲವಾಗಿ ಕಣ್ಮರೆಯಾಗಿವೆ. ಅದರ ಪರಿಣಾಮವಾಗಿ ತಾಲ್ಲೂಕಿನ ಜನತೆ ಹನಿ ಹನಿ ನೀರಿಗೂ ಪರಿತಪಿಸುವಂತಾಗಿದೆ. ಇಂತಹ ಜೀವನದಿಯ ಜೀವಂತಿಕೆಗಾಗಿ ತಾಲ್ಲೂಕಿನ ಕೆಲವು ಜನಪರ ಚಿಂತಕರು ‘ಗುಂಡ್ಲು ನದಿ ಅಭಿಯಾನ’ವನ್ನು ಆರಂಭಿಸಿದ್ದು, ಇದಕ್ಕೆ ಸ್ಥಳೀಯರೆಲ್ಲ ಒಗ್ಗಟ್ಟಿನಿಂದ ಕೈ ಜೋಡಿಸುವುದು ಅನಿವಾರ್ಯವಾಗಿದೆ.
ತಾಲ್ಲೂಕಿನಲ್ಲಿರುವ ಹಲವಾರು ಹಳ್ಳಿಗಳ ಲಕ್ಷಾಂತರ ಜನರಿಗೆ ಮಳೆಯಾದರಷ್ಟೇ ಬೆಳೆ, ಇಲ್ಲವಾದಲ್ಲಿ ಇಲ್ಲ. ಮತ್ತೊಂದು ಕಡೆ, ಬೇಸಿಗೆಯ ಕಾಲದಲ್ಲಂತೂ ತಾಲ್ಲೂಕಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ನೀರಿಗಾಗಿ ಭಾರಿ ಹಾಹಾಕಾರ ಶುರುವಾಗಿ ಬಿಡುತ್ತದೆ. ಕುಡಿಯುವ ನೀರು ತರಲು ಜನ ಕಿಲೊಮೀಟರ್ಗಟ್ಟಲೆ ಅಲೆಯಬೇಕಾಗುತ್ತದೆ. ಇದು ಹೀಗೇ ಮುಂದುವರಿದರೆ ತಾಲ್ಲೂಕಿನ ಜನರ ಗತಿ ಅಧೋಗತಿಯಾಗುತ್ತದೆ ಎಂದು ಮನಗಂಡು, ಗುಂಡ್ಲು ನದಿಯ ಉಳಿವಿಗಾಗಿ ಅಭಿಯಾನ ಆರಂಭಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ರಾಘವೇಂದ್ರ ಅಪುರಾ, ಅಗತಗೌಡನಹಳ್ಳಿ, ಗುಂಡ್ಲುಪೇಟೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.