ರಾಜ್ಯದಲ್ಲಿ ಹಿಂದಿ ಹೇರಿಕೆ ಬೇಡ ಎಂದು ಒಕ್ಕೊರಲಿನಿಂದ ವಿರೋಧಿಸುತ್ತಿದ್ದರೂ ವಿಧಾನಸೌಧದಲ್ಲಿ ರಾಜ್ಯಪಾಲರು ಸದನಗಳ ಜಂಟಿ ಅಧಿವೇಶನದಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ್ದು ಹುಣ್ಣಿನ ಮೇಲೆ ಬರೆ ಹಾಕಿದಂತೆ. ದುರಂತವೆಂದರೆ, ವಿರೋಧ ಪಕ್ಷಗಳ ಎಲ್ಲ ನಾಯಕರೂ ಈ ಬಗ್ಗೆ ಮೌನವಾಗಿದ್ದುದು.
ಹಿಂದೆ, ಕನ್ನಡ ತಿಳಿಯದ ರಾಜ್ಯಪಾಲರು ಸೌಜನ್ಯಕ್ಕಾಗಿಯಾದರೂ ಕೆಲವು ವಾಕ್ಯಗಳನ್ನು ಕನ್ನಡದಲ್ಲಿ ಓದಿದ ನಂತರ ಪರಭಾಷೆಯಲ್ಲಿ ಓದುತ್ತಿದ್ದರು. ಈಗಿರುವ ರಾಜ್ಯಪಾಲರು ಇಲ್ಲಿಗೆ ಬಂದು ವರ್ಷಗಳೇ ಕಳೆದಿದ್ದರೂ ಕನ್ನಡವನ್ನು ಕಲಿಯುವ ಆಸಕ್ತಿಯನ್ನೇ ತೋರಿಸದಿರುವುದು ವಿಷಾದನೀಯ. ಜೈಲಿನಲ್ಲಿದ್ದ ಶಶಿಕಲಾ ಕನ್ನಡ ಕಲಿತರು. ತುರ್ತುಪರಿಸ್ಥಿತಿಯಲ್ಲಿ ಬೆಂಗಳೂರು ಜೈಲಿನಲ್ಲಿದ್ದ ಎಲ್.ಕೆ.ಅಡ್ವಾಣಿ, ಬಳ್ಳಾರಿಯಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದ ಸುಷ್ಮಾ ಸ್ವರಾಜ್ ಸ್ವಲ್ಪಮಟ್ಟಿಗಾದರೂ ಕನ್ನಡವನ್ನು ಕಲಿತಿದ್ದರು. ವಿರೋಧವಿದ್ದರೂ ಹಿಂದಿ ಹೇರುವುದು ಸರ್ವಾಧಿಕಾರಿ ನೀತಿಯಲ್ಲವೇ? ಹೀಗೆ ವರ್ತಿಸಿದರೆ ಹಿಂದಿ ಬಗ್ಗೆ ಪ್ರೀತಿ ಮೂಡುತ್ತದೆಯೇ?
- ಕೆ.ಎನ್.ಭಗವಾನ್,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.