ಕನಕದುರ್ಗಾ ಮತ್ತು ಬಿಂದು ಎಂಬ ಇಬ್ಬರು ಮಹಿಳೆಯರು ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಾಲಯವನ್ನು ಪ್ರವೇಶಿಸಿರುವುದು ಚಾರಿತ್ರಿಕ ಘಟನೆ. ಈ ಘಟನೆಯಿಂದ ಕೆಲವರು ಮುನಿಸಿಕೊಂಡು ಪ್ರತಿಭಟನೆಗಿಳಿದು, ಅದು ಹಿಂಸಾಚಾರಕ್ಕೆ ತಿರುಗಿರುವುದು ವಿಷಾದನೀಯ.
ಮಹಿಳೆಯರು ದೇವಾಲಯವನ್ನು ಪ್ರವೇಶಿಸಿದ ನಂತರ ಅಲ್ಲಿ ಶುದ್ಧೀಕರಣ ನಡೆಸಿದ್ದು ಖಂಡನೀಯ. ವಾಸ್ತವದಲ್ಲಿ ನಮ್ಮ ಮನಸ್ಸುಗಳ ಮಾಲಿನ್ಯವನ್ನು ಶುದ್ಧೀಕರಿಸುವ ಕೆಲಸ ಆಗಬೇಕಾಗಿದೆ. ಆರ್ಥಿಕ, ಶೈಕ್ಷಣಿಕ ಸ್ವಾತಂತ್ರ್ಯದಂತೆ ಧಾರ್ಮಿಕ ಸ್ವಾತಂತ್ರ್ಯವೂ ಮಹಿಳೆಯ ಹಕ್ಕು. ಈಗಲಾದರೂ ಮಹಿಳೆಗೆ ಆಕೆಯ ಹಕ್ಕನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ನಾವು ಯೋಚಿಸಬೇಕಿದೆ.
ಪ್ರೊ.ಸಿ.ಪಿ. ಸಿದ್ಧಾಶ್ರಮ, ಮೈಸೂರು
***
ಸಂಪ್ರದಾಯವನ್ನು ಗೌರವಿಸಬೇಕು
ಶಬರಿಮಲೆ ದೇವಸ್ಥಾನ ಪ್ರವೇಶ ಮಾಡಿದ ಸ್ತ್ರೀಯರಿಗೆ ನಿಜವಾಗಿ ದೇವರ ಮೇಲೆ ಭಕ್ತಿ ಇದ್ದಿದ್ದೇ ಆದರೆ ಅವರು ದೇವಸ್ಥಾನ ಪ್ರವೇಶಕ್ಕೂ ಮೊದಲು ಕೆಲವು ಆಚಾರ, ನಿಯಮಗಳ ಪಾಲನೆ ಮಾಡಬೇಕಿತ್ತು. ಇರುಮುಡಿ ಇಲ್ಲದೆ, ಹದಿನೆಂಟು ಮೆಟ್ಟಿಲುಗಳನ್ನೇರದೆ ಹಿಂದಿನಿಂದ ದೇವಸ್ಥಾನ ಪ್ರವೇಶಿಸುವ ಆತುರ ತೋರಿಸಿದ್ದು ಏಕೆ? ಭಕ್ತಿಗಿಂತ ಮುಖ್ಯವಾಗಿ ಬಹುಸಂಖ್ಯಾತ ಭಕ್ತರ ಶ್ರದ್ಧೆಯನ್ನು ಹಾಳು ಮಾಡುವುದು, ಅವರ ನಂಬಿಕೆಯನ್ನು ಗಾಸಿಗೊಳಿಸುವುದು ಅವರ ಉದ್ದೇಶವಾಗಿತ್ತು ಎಂದು ತೋರುತ್ತದೆ. ಪ್ರತಿಯೊಂದು ದೇವಸ್ಥಾನ ಅಥವಾ ಧಾರ್ಮಿಕ ಕ್ಷೇತ್ರಕ್ಕೆ ಅದರದ್ದೇ ಆದ ನಿಯಮ, ಸಂಪ್ರದಾಯ ಇರುತ್ತದೆ. ಅದನ್ನು ಎಲ್ಲರೂ ಗೌರವಿಸಬೇಕು.
ಎಂ. ಪರಮೇಶ್ವರ, ಮದ್ದಿಹಳ್ಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.