ADVERTISEMENT

ವಾಚಕರ ವಾಣಿ: ಗೃಹಿಣಿಯರ ಪಾಲಿಗೆ ಆಶಾದಾಯಕ ಬೆಳವಣಿಗೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 19:30 IST
Last Updated 19 ಫೆಬ್ರುವರಿ 2021, 19:30 IST

‘ಮತ ಬೇಟೆಗೆ ಹೊಸ ಅಸ್ತ್ರ’ ಎಂಬ ಡಾ. ಗೀತಾ ಕೃಷ್ಣಮೂರ್ತಿ ಅವರ ಲೇಖನ (ಪ್ರ.ವಾ., ಫೆ. 10) ಮಾರ್ಮಿಕವಾಗಿ ಮೂಡಿಬಂದಿದೆ. ತಮಿಳುನಾಡಿನ ಹೊಸ ರಾಜಕೀಯ ಪಕ್ಷವೊಂದು ಮಹಿಳೆಯರು ಮಾಡುವ ಮನೆಗೆಲಸವನ್ನು ಮೌಲ್ಯೀಕರಿಸಿ ಅದಕ್ಕೆ ವೇತನ ನೀಡುವ ಭರವಸೆಯನ್ನು ಇತ್ತೀಚೆಗೆ ತನ್ನ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿರುವ ವಿಚಾರದ ಬಗ್ಗೆ ಹಾಗೂ ಅದು ಉಂಟು ಮಾಡಬಹುದಾದ ದೂರಗಾಮಿ ಪರಿಣಾಮಗಳ ಬಗ್ಗೆ ಅವರು ವಸ್ತುನಿಷ್ಠವಾಗಿ ಚರ್ಚಿಸಿದ್ದಾರೆ. ತನ್ನ ಬಗ್ಗೆ ಚಿಂತಿಸದೆ ಸದಾಕಾಲ ತನ್ನ ಕುಟುಂಬಕ್ಕಾಗಿ ಗಾಣದೆತ್ತಿನಂತೆ ದುಡಿಯುವ ಗೃಹಿಣಿಯರ ಪಾಲಿಗೆ ಇದು ಆಶಾದಾಯಕ ಬೆಳವಣಿಗೆ. ಆದರೆ, ಇದರಲ್ಲೂ ಹಲವಾರು ಸಮಸ್ಯೆಗಳಿವೆ.

ಉದ್ಯೋಗಸ್ಥ ಮಹಿಳೆಗೆ ಮಣೆ ಹಾಕುವ ನಮ್ಮ ಸಮಾಜ, ಗೃಹಕೃತ್ಯವೆಸಗುವ ಗೃಹಿಣಿಯರನ್ನು ಕಡೆಗಣಿಸು ತ್ತದೆ. ಅವರನ್ನು ಗೌರವದಿಂದ ಕಾಣುವಂತಹ ವಾತಾವರಣ ಇನ್ನು ಮುಂದಾದರೂ ನಿರ್ಮಾಣವಾಗಬೇಕು. ಗೃಹಕೃತ್ಯದಿಂದ ಹೈರಾಣಾದ ಮಹಿಳೆ ತನ್ನ ಆರ್ಥಿಕ ಅವಲಂಬನೆಯಿಂದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಅವಕಾಶಗಳಿಂದ ವಂಚಿತಳಾಗಿದ್ದಾಳೆ. ಈ ಹಿನ್ನೆಲೆಯಲ್ಲಿ ಅವಳಿಗೆ ಕೊಡುವ ವೇತನ ಅವಳಿಗೆ ಹೆಚ್ಚಿನ ಗೌರವ ವನ್ನು, ಸಮಾನತೆಯನ್ನು ಮತ್ತು ಸ್ವಾತಂತ್ರ್ಯವನ್ನು ತಂದುಕೊಟ್ಟರೆ ಅದಕ್ಕಿಂತ ಹೆಚ್ಚಿನದೇನೂ ಅವಳಿಗೆ ಬೇಕಾಗಿಲ್ಲ. ಆದರೆ, ಪುರುಷಪ್ರಧಾನ ಸಮಾಜದಲ್ಲಿ ಇದು ಸಾಧ್ಯವೇ?

-ವೀಣಾ ಸುಬ್ರಹ್ಮಣ್ಯ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.