‘ಹೈದರಾಬಾದ್- ಕರ್ನಾಟಕ ಪ್ರದೇಶವನ್ನು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದಂತೆ ಮುಂಬೈ- ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಬೇಕೆಂದು ಮುಖ್ಯಮಂತ್ರಿಗೆ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಪತ್ರ ಬರೆದಿದ್ದಾರೆ (ಪ್ರ.ವಾ.,ಅ.11). ಹರಿದು ಹಂಚಿಹೋಗಿದ್ದ ಕನ್ನಡ ಪ್ರದೇಶವನ್ನು ಒಂದುಗೂಡಿಸಲು ನಮ್ಮ ಹಿರಿಯರು ಏಕೀಕರಣ ಚಳವಳಿ ಮಾಡಿ ನವ ಮೈಸೂರು, ಕೊನೆಗೆ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬರಲು ಕಾರಣರಾದರು. ಈಗಿನವರು ರಾಜ್ಯದ ವಿಘಟನೆಯ ಕನಸು ಕಾಣುವುದು ವಿಷಾದನೀಯ.
ಕನ್ನಡ ಪ್ರದೇಶ ಒಂದಾದ ಮೇಲೆ ಹೈದರಾಬಾದ್ ಕರ್ನಾಟಕ ಪ್ರದೇಶ, ಮುಂಬೈ ಕರ್ನಾಟಕ ಪ್ರದೇಶ ಎಂದೆಲ್ಲ ಅವುಗಳನ್ನು ಗುರುತಿಸುವುದು ಸರಿಯೇ? ಅವುಗಳ ಬದಲಿಗೆ ಕಲ್ಯಾಣ ವಿಭಾಗ, ಕಿತ್ತೂರು ವಿಭಾಗ (ಡಿವಿಜನ್) ಎಂದು ಕರೆಯುವುದು ಸೂಕ್ತ ಎನಿಸುತ್ತದೆ. ಈಗ ಕಲ್ಯಾಣ ಕರ್ನಾಟಕ, ನಾಳೆ ಕಿತ್ತೂರು ಕರ್ನಾಟಕ ಆದಮೇಲೆ ಹಳೆ ಮೈಸೂರು ಭಾಗದವರು ಮೈಸೂರು ಕರ್ನಾಟಕ ಎಂದು ಕರೆಯಲು ಬೇಡಿಕೆ ಇಡಬಹುದು. ಇನ್ನೂ ಮುಂದೆ ಹೋಗಿ, ಅವುಗಳ ಪ್ರತ್ಯೇಕ ರಾಜ್ಯಕ್ಕೂ ಬೇಡಿಕೆ ಬರಬಹುದು. ಯಾವುದೇ ಕ್ರಮ ಕೈಗೊಳ್ಳುವ ಮುನ್ನ ಇದನ್ನೆಲ್ಲ ಗಮನದಲ್ಲಿ ಇಟ್ಟುಕೊಳ್ಳುವುದು ಒಳಿತು.
-ಸಿ.ಸಿದ್ಧರಾಜು ಆಲಕೆರೆ,ಮಂಡ್ಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.