ಶಿಕ್ಷಣವು ಕನ್ನಡ ಮಾಧ್ಯಮದಲ್ಲಿ ನಡೆಯಬೇಕೋ ಇಂಗ್ಲಿಷ್ ಮಾಧ್ಯಮದಲ್ಲೋ ಎನ್ನುವ ಗೊಂದಲ ಮತ್ತೆ ಮುನ್ನೆಲೆಗೆ ಬಂದಿದೆ. ಕಲಿಕೆಯ ಹಿಂದೆ ಇರಬೇಕಾದ ವೈಜ್ಞಾನಿಕತೆಯ ಬಗ್ಗೆ ಇರುವ ಕಳವಳಕಾರಿ ಕೊರತೆ ಮತ್ತು ಇಂಗ್ಲಿಷ್ ಬಗ್ಗೆ ಇರುವ ಆಕರ್ಷಣೆ, ಭ್ರಮೆಗಳ ನಡುವಿನ ತಿಕ್ಕಾಟವಿದು. ಬ್ರಿಟಿಷರು ತಮ್ಮ ಕುಟಿಲೋಪಾಯದ ಮೂಲಕ ದೇಶದಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಹೇರುವುದಕ್ಕೂ ಮೊದಲು ನಮ್ಮಲ್ಲಿದ್ದ ಶಿಕ್ಷಣ ವ್ಯವಸ್ಥೆಯನ್ನು ಮಹಾತ್ಮ ಗಾಂಧಿ ‘ಬ್ಯೂಟಿಫುಲ್ ಟ್ರೀ’ ಎಂದು ಕರೆದಿದ್ದರು. ಆ ಕಾಲದ ಶಿಕ್ಷಣ ವ್ಯವಸ್ಥೆಯನ್ನು ಆಳವಾಗಿ ಅಧ್ಯಯನ ಮಾಡಿರುವ ಗಾಂಧಿವಾದಿ ಚಿಂತಕ ಧರ್ಮಪಾಲ್ ಕೂಡ ತಮ್ಮ ಕೃತಿಗೆ ಇದೇ ಹೆಸರನ್ನಿಟ್ಟಿದ್ದಾರೆ.
ವಿದೇಶಿ ಕಂಪನಿಗಳಲ್ಲಿ ಚಾಕರಿ ಮಾಡುವಂಥ ಒಂದು ವರ್ಗವನ್ನು ಸೃಷ್ಟಿಸಿರುವುದನ್ನೇ ದೊಡ್ಡ ಸಾಧನೆಎಂದು ಹೇಳಿಕೊಂಡು ನಾವು ಬೀಗುತ್ತಿದ್ದೇವೆ. ಇಂಗ್ಲಿಷ್ ಮಾಧ್ಯಮ ಶಿಕ್ಷಣದಿಂದ ಆಗುತ್ತಿರುವ ಈ ನೆಲದ ಪ್ರತಿಭೆಯ ಪೋಲು ಮತ್ತು ಅಪವ್ಯಯಗಳನ್ನು ಯಾರೂ ಲೆಕ್ಕಕ್ಕೆ ತೆಗೆದುಕೊಳ್ಳದೇ ಇರುವುದು ದಿಗ್ಭ್ರಮೆ ಹುಟ್ಟಿಸುವಂಥ ಸಂಗತಿ. ನಮ್ಮ ಶಿಕ್ಷಣ ನಮ್ಮ ಭಾಷೆಯಾದ ಕನ್ನಡದಲ್ಲೇ ನಡೆಯಬೇಕು. ಇದರ ಜತೆಗೆ ಇಂಗ್ಲಿಷ್ ಸೇರಿದಂತೆ ಹತ್ತಾರು ಭಾಷೆಗಳನ್ನು ‘ಕಮ್ಯುನಿಕೇಟಿವ್’ ಆಗಿ ಚೆನ್ನಾಗಿ ಕಲಿಸಬೇಕು. ‘ವಸಾಹತುಶಾಹಿ ಆಡಳಿತದ
ವಿಷವರ್ತುಲದಲ್ಲಿದ್ದ ದೇಶಗಳಲ್ಲಿ ತಾಂಡವವಾಡುತ್ತಿರುವ ಇಂಗ್ಲಿಷ್ ಭಾಷೆಯು ಒಂದು ಕಲ್ಚರ್ ಬಾಂಬ್ ಇದ್ದಂತೆ’ ಎಂಬ ಲೇಖಕ ಗೂಗಿ ವಾ ಥಿಯೋಂಗ್ನ ಮಾತು ನಮಗೆ ಎಚ್ಚರಿಕೆಯ ಗಂಟೆಯಾಗಬೇಕು. ನಮ್ಮ ಭಾಷೆ ಉಳಿಯದಿದ್ದರೆ ನಮ್ಮ ಸಾಹಿತ್ಯ, ಸಂಸ್ಕೃತಿ, ಮೌಲ್ಯಪ್ರಜ್ಞೆ ಯಾವುದಕ್ಕೂ ಉಳಿಗಾಲವಿಲ್ಲ.
ಬಿ.ಎಸ್.ಜಯಪ್ರಕಾಶ ನಾರಾಯಣ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.