ADVERTISEMENT

ತನಿಖಾ ಸಂಸ್ಥೆಯಿಂದ ಪರೋಕ್ಷ ದಾಳಿ?

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 19:31 IST
Last Updated 28 ಮಾರ್ಚ್ 2021, 19:31 IST

ಸಚಿವರಾಗಿದ್ದವರೊಬ್ಬರ ವಿರುದ್ಧ ಯುವತಿಯೊಬ್ಬರು ಮಾಡಿರುವ ಲೈಂಗಿಕ ದೌರ್ಜನ್ಯದ ಆರೋಪದ ಕುರಿತು ದೂರು ನೋಂದಾಯಿಸಲ್ಪಟ್ಟಿದೆ. ಸಂತ್ರಸ್ತೆ ತನ್ನ ದೂರಿನಲ್ಲಿ ಸಚಿವರು ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದರೆ ನೌಕರಿ ಕೊಡಿಸುವ ಆಮಿಷ ಒಡ್ಡಿ ಬಲೆಗೆ ಹಾಕಿಕೊಂಡಿದ್ದಾಗಿ ತಿಳಿಸಿದ್ದಾರೆ. ಸಚಿವರೊಬ್ಬರು ಸಾರ್ವಜನಿಕ ನೌಕರ. ತನ್ನ ಶಾಸನಬದ್ಧ ಅಧಿಕಾರವನ್ನು ಬಳಸಿ ಅಕ್ರಮವಾಗಿ ಕೆಲಸ ಕೊಡಿಸುವುದನ್ನು ದುರ್ನಡತೆ ಎಂದು ವ್ಯಾಖ್ಯಾನಿಸಲಾಗಿದೆ. ಭ್ರಷ್ಟಾಚಾರ ಕೇವಲ ಹಣದ ರೂಪದಲ್ಲಿಯೇ ಇರಬೇಕಾಗಿಲ್ಲ. ಅದು ಯಾವ ಬಗೆಯಲ್ಲಾದರೂ ಇರಬಹುದು. ಇದು ಕಾನೂನಿನ ಅಡಿಯಲ್ಲಿ ಶಿಕ್ಷಾರ್ಹವಾದುದು.

ಬಾಧಿತೆಯ ದೂರನ್ನು ಆಧರಿಸಿ ಐಪಿಸಿ ಸೆಕ್ಷನ್ 376C ಅಡಿಯಲ್ಲಿ ಎಫ್.ಐ.ಆರ್ ಹೂಡಲಾಗಿದೆ. ಹೆಣ್ಣೊಂದು ಸಾಂಸ್ಥಿಕವಾಗಿ ಕಾನೂನಿನ ರಕ್ಷಣೆಯಲ್ಲಿದ್ದಾಗ ನಡೆಯುವ ದೌರ್ಜನ್ಯದ ಕುರಿತು ಈ ಕಲಂ ಸ್ಪಷ್ಟವಾಗಿ ಹೇಳುತ್ತದೆ. ಮಾಜಿ ಸಚಿವರ ಪ್ರಕರಣದಲ್ಲಿ ಸಂತ್ರಸ್ತೆಯು ಕಾನೂನಿನ ದೃಷ್ಟಿಯಿಂದ ಯಾವುದೇ ಸಾಂಸ್ಥಿಕ ಹಿಡಿತದಲ್ಲಿ ಇರಲಿಲ್ಲ. ಅಲ್ಲದೆ ಸಚಿವರನ್ನು ಒಂದು ಸಂಸ್ಥೆಯೆಂದು ಅರ್ಥೈಸಲಾಗದು. ಜೈಲು, ಆಸ್ಪತ್ರೆ, ಮಹಿಳಾ ರಕ್ಷಣಾ ಕೇಂದ್ರ, ಮಹಿಳಾ ಹಾಸ್ಟೆಲ್‌ನಂತಹ ವಸತಿ ಕೇಂದ್ರದಲ್ಲಿ ಮಹಿಳೆಯರು ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಕಾನೂನಿನ ಅಡಿಯಲ್ಲಿ ರಕ್ಷಣೆಯಲ್ಲಿರುತ್ತಾರೆ. ಅಲ್ಲಿ ಜರುಗುವ ಲೈಂಗಿಕ ಅಪರಾಧ ಪ್ರಕರಣಗಳನ್ನು ಗಣನೆಗೆ ತೆಗೆದುಕೊಂಡು ರೂಪಿಸಿರುವ ಕಾನೂನಿನ ಅಂಶವನ್ನು ಸದರಿ ಪ್ರಕರಣದಲ್ಲಿ ಅಳವಡಿಸುವುದು ಸರಿಯಲ್ಲ.

ಈ ಸರಳ ಕಾನೂನಿನ ಅಂಶ ಪೊಲೀಸ್‌ ಇಲಾಖೆಗೆ ತಿಳಿದಿಲ್ಲ ಎಂದು ಭಾವಿಸಲಾಗದು. ಇದರ ಹಿಂದೆ ಆರೋಪಿಗೆ ಅನುಕೂಲ ಮಾಡಿಕೊಡುವ ಕಪಟತನವಿದೆ. ಸಾಂಸ್ಥಿಕ ದೌರ್ಜನ್ಯದ ವ್ಯಾಪ್ತಿಗೆ ಈ ದೂರನ್ನು ಸೀಮಿತಗೊಳಿಸಿದರೆ ಆರೋಪಿಯು ಸುಲಭವಾಗಿ ಜಾಮೀನು ಪಡೆದುಕೊಳ್ಳಲು ಅನುವಾಗುತ್ತದೆ. ಅಲ್ಲದೆ ಈ ಪ್ರಕರಣವನ್ನು ಅತ್ಯಾಚಾರವಲ್ಲದ ಲೈಂಗಿಕ ಕ್ರಿಯೆ ಎಂದು ವ್ಯಾಖ್ಯಾನಿಸಿ, ಕಾನೂನಿನ ಅಡಿಯಲ್ಲಿ ಸಂತ್ರಸ್ತೆಗೆ ದೊರಕುವ ಕಾನೂನಿನ ಮೂಲಭೂತ ರಕ್ಷಣೆಯನ್ನು ಹೊಸಕಿ ಹಾಕುವ ಹುನ್ನಾರ ಅಡಗಿದೆಯೇ ಎಂಬ ಬಲವಾದ ಶಂಕೆಗೆ ಎಡೆಮಾಡಿಕೊಟ್ಟಂತಾಗುತ್ತದೆ. ಹಾಗಾಗಿ ಈ ಪ್ರಕರಣದಲ್ಲಿ ಸೆಕ್ಷನ್ 376ರ ಅಡಿಯಲ್ಲಿಯೇ ತನಿಖೆಯನ್ನು ಸ್ಥಿರಗೊಳಿಸಬೇಕು. ಕಾನೂನಿನ ಅಡಿಯಲ್ಲಿ ಶೋಷಿತರಿಗೆ ನ್ಯಾಯಬದ್ಧವಾಗಿ ಲಭಿಸಬೇಕಾದ ರಕ್ಷಣೆಗಳನ್ನು ತಪ್ಪಿಸುವುದು ಅಕ್ಷ್ಯಮ. ಇಲ್ಲದೇ ಹೋದಲ್ಲಿ ಇದು ಸರ್ಕಾರದ ತನಿಖಾ ಸಂಸ್ಥೆಗಳು ಅತ್ಯಾಚಾರ ಸಂತ್ರಸ್ತೆಯ ಮೇಲೆ ನಡೆಸುವ ಪರೋಕ್ಷ ದಾಳಿಯೆಂದು ಅರ್ಥೈಸ
ಬೇಕಾದೀತು.

ADVERTISEMENT

ಸಿ.ಎಚ್.ಹನುಮಂತರಾಯ, ಕೆ.ಬಿ.ಕೆ.ಸ್ವಾಮಿ, ಡೆರಿಕ್ ಅನಿಲ್,ವಕೀಲರು, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.