ಸೋಮವಾರ ನಡೆದ ಕರ್ನಾಟಕ ಬಂದ್ ಸಂದರ್ಭದಲ್ಲಿ ರಾಜ್ಯದ ಬಹುತೇಕ ಕಡೆ ಟೈರ್ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿರುವುದು ವರದಿಯಾಗಿದೆ (ಪ್ರ.ವಾ., ಸೆ. 29). ಯಾವುದೇ ಪ್ರತಿಭಟನೆಯ ಬಗ್ಗೆ ನಮ್ಮ ಚಕಾರವಿಲ್ಲ. ಆದರೆ ಪ್ರತಿಭಟನೆಗಳ ರೀತಿಯ ಬಗ್ಗೆ ಕಳವಳವಿದೆ. ಪ್ರತೀ ವರ್ಷ ದೇಶದಲ್ಲಿ ವಿವಿಧ ಕಾರಣಗಳಿಗೆ ಪ್ರತಿಭಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ ಪ್ರತಿಭಟಿಸುವವರ ಮನಃಸ್ಥಿತಿ ಮಾತ್ರ ಬದಲಾಗುತ್ತಲೇ ಇಲ್ಲ. ಮತ್ತದೇ ಹಳೆಯ ಟೈರ್ಗಳನ್ನು ರಸ್ತೆಯಲ್ಲಿ ಸುಡುವ, ಬಸ್ಸುಗಳಿಗೆ ಬೆಂಕಿ ಹಚ್ಚಿ ಶೌರ್ಯ ಮೆರೆಯುವ, ಸಾರ್ವಜನಿಕ ವಸ್ತುಗಳನ್ನು ಹಾಳು ಮಾಡುವ ಕಾರ್ಯಗಳು ನಡೆಯುತ್ತಲೇ ಇರುತ್ತವೆ.
ಟೈರ್ಗಳಿಂದ ಹೊರಸೂಸುವ ದಟ್ಟ ಹೊಗೆ ವಿಪರೀತ ವಾಯುಮಾಲಿನ್ಯವನ್ನು ಉಂಟುಮಾಡುತ್ತದೆ. ಜೊತೆಗೆ ನಮ್ಮ ಓಝೋನ್ ಪದರಕ್ಕೆ ಹಾನಿ ಉಂಟುಮಾಡುತ್ತದೆ. ಇನ್ನು ಸಾರ್ವಜನಿಕ ಆಸ್ತಿಪಾಸ್ತಿಯನ್ನು ಹಾಳುಮಾಡಿದರೆ ತೆರಿಗೆ ರೂಪದಲ್ಲಿ ಮರಳಿ ಸಾರ್ವಜನಿಕರೇ ದಂಡ ಕಟ್ಟಬೇಕಾಗುತ್ತದೆ. ಆದ್ದರಿಂದ ಪ್ರತಿಭಟನೆಗಳು ಪರಿಸರ ಮತ್ತು ಜನಸ್ನೇಹಿಯಾಗಿರಲಿ. ನ್ಯಾಯವನ್ನು ಕೇಳುವ ಭರದಲ್ಲಿ ನಮಗೆ ನಾವೇ ಅನ್ಯಾಯ ಮಾಡಿಕೊಳ್ಳುವ ಮೂರ್ಖತನ ನಿಲ್ಲಲಿ.
ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.