ರಾಜ್ಯ ಪರೀಕ್ಷಾ ಪ್ರಾಧಿಕಾರವು ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಇತ್ತೀಚೆಗೆ ಅರ್ಜಿ ಆಹ್ವಾನಿಸಿದೆ. ಈ ಅರ್ಜಿ ಶುಲ್ಕ ₹ 2,000. ಹೀಗಾದರೆ ಬಡವನಾದವನು ಹೇಗೆ ಅರ್ಜಿ ಸಲ್ಲಿಸಲು ಸಾಧ್ಯ? ರಾಜ್ಯದಲ್ಲಿರುವ ಲಕ್ಷಾಂತರ ಮಂದಿ ಪಿಎಚ್.ಡಿ. ಪದವೀಧರರು ಮತ್ತು ನೆಟ್ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಉಪನ್ಯಾಸಕ ಹುದ್ದೆಗಳಿಗೆ ಅರ್ಹರಾದವರು ತಿಂಗಳಿಗೆ ಅತ್ಯಲ್ಪ ವೇತನಕ್ಕೆ ದುಡಿಯುವಂತಹ ಸ್ಥಿತಿ ಇದೆ. ಅರ್ಜಿ ಹಾಕಿದ ಕೂಡಲೇ ನೌಕರಿ ಸಿಗುವುದೆಂಬ ಖಾತರಿಯೇನೂ ಇಲ್ಲ. ಪ್ರಾಧಿಕಾರವು ಸಾವಿರಾರು ಹುದ್ದೆಗಳಿಗೆ ಅರ್ಜಿ ಕರೆದಾಗ ಇದರಿಂದ ಸರ್ಕಾರದ ಖಜಾನೆಗೆ ಸಂದಾಯವಾಗುವ ಅರ್ಜಿ ಶುಲ್ಕದ ಮೊತ್ತವೇ ಕೋಟ್ಯಂತರ ರೂಪಾಯಿ. ಇಲಾಖೆಗಳು ಹೀಗೂ ಸರ್ಕಾರದ ಖಜಾನೆಯನ್ನು ತುಂಬಿಸಲು ಪ್ರಯತ್ನಿಸುತ್ತವೆ!
ಕೊರೊನಾದ ಈ ಕಾಲಘಟ್ಟದಲ್ಲಿ ಬಹಳಷ್ಟು ಯುವಕ, ಯುವತಿಯರು ಅತ್ಯಲ್ಪ ಆದಾಯದ ನೌಕರಿಯನ್ನೂ ಕಳೆದುಕೊಂಡು ಬೀದಿ ಪಾಲಾಗಿರುವುದು ಕಟುಸತ್ಯ. ಇಂತಹ ಕಷ್ಟ ಕಾಲದಲ್ಲಿ ಸರ್ಕಾರ ಅರ್ಜಿಗೆ ಇಷ್ಟೊಂದು ಶುಲ್ಕ ವಿಧಿಸಿದರೆ ಲಕ್ಷಾಂತರ ಪ್ರತಿಭಾವಂತ ಯುವಜನರು ಸರ್ಕಾರಿ ಹುದ್ದೆಗಳಿಗೆ ಅರ್ಜಿಯನ್ನೇ ಸಲ್ಲಿಸಲಾಗದೆ ಅದೃಷ್ಟವಂಚಿತರಾಗುವ ಸಾಧ್ಯತೆ ಇಲ್ಲದಿಲ್ಲ. ನೆರೆಯ ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಸರ್ಕಾರಿ ಹುದ್ದೆಗಳ ಅರ್ಜಿ ಸಲ್ಲಿಕೆಗೆ ದುಬಾರಿ ಶುಲ್ಕ ವಿಧಿಸುವುದಿಲ್ಲ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ಬಡಜನರ ಉದ್ಯೋಗಕ್ಕೆ ನೆರವಾಗುವಂತಹ ಸರಳ ನೀತಿಯೊಂದನ್ನು ರೂಪಿಸಲಿ.
-ಬೇ.ನ.ಶ್ರೀನಿವಾಸಮೂರ್ತಿ,ತುಮಕೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.