ADVERTISEMENT

ವಾಚಕರ ವಾಣಿ: ಗಗನಯಾನ ಯೋಜನೆ ಸ್ಥಳಾಂತರ ಸಲ್ಲ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 1 ಡಿಸೆಂಬರ್ 2021, 19:31 IST
Last Updated 1 ಡಿಸೆಂಬರ್ 2021, 19:31 IST

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) 2023ರ ಮಾನವಸಹಿತ ಗಗನಯಾನ ಯೋಜನೆಯನ್ನು ಬೆಂಗಳೂರಿನಿಂದ ಗುಜರಾತ್‌ಗೆ ಸ್ಥಳಾಂತರಿಸುವ ಪ್ರಸ್ತಾವ ಕೈಬಿಡುವಂತೆ ಒತ್ತಾಯಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವುದು (ಪ್ರ.ವಾ., ನ. 29) ಸ್ವಾಗತಾರ್ಹ ನಡೆ. ಏಕೆಂದರೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಇಸ್ರೊದ ಕೇಂದ್ರ ಕಚೇರಿಯಿದೆ. ಅಲ್ಲದೆ ರಾಜ್ಯದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಭಾರತೀಯ ವಿಜ್ಞಾನ ಸಂಸ್ಥೆಯಂತಹ (ಐಐಎಸ್‌ಸಿ) ರಾಷ್ಟ್ರ ಮಟ್ಟದ ಸರ್ಕಾರಿ ಸಂಸ್ಥೆಗಳಿವೆ. ಈ ಕಾರಣಕ್ಕೆ ಇಡೀ ಜಗತ್ತು ಇಂದು ರಾಜ್ಯದತ್ತ ನೋಡುವಂತೆ ಆಗಿದೆ. ಇನ್ನೊಂದೆಡೆ, ಜಗತ್ತಿನ ಸಾಫ್ಟ್‌ವೇರ್ ಕ್ಷೇತ್ರದ ಪ್ರಸಿದ್ಧ ಕಂಪನಿಗಳು ಸೇರಿದಂತೆ ನೂರಾರು ಕಂಪನಿಗಳು ಬೆಂಗಳೂರಿನಲ್ಲಿ ಬೀಡುಬಿಟ್ಟಿವೆ. ಹೀಗಿರುವಾಗ ಇಸ್ರೊದ ಉದ್ದೇಶಿತ ಮಾನವಸಹಿತ ಗಗನಯಾನ ಯೋಜನೆಯನ್ನು ಬೆಂಗಳೂರಿನಿಂದ ಗುಜರಾತ್‌ಗೆ ಸ್ಥಳಾಂತರಿಸುವುದು ಎಷ್ಟರಮಟ್ಟಿಗೆ ಸರಿ?

ಈ ದಿಸೆಯಲ್ಲಿ ಶಿವಕುಮಾರ್ ಅವರು ಈ ಕುರಿತು ಪ್ರಧಾನಿ ಬಳಿಗೆ ರಾಜ್ಯದಿಂದ ನಿಯೋಗ ಕೊಂಡೊಯ್ಯುವಂತೆ ಮುಖ್ಯಮಂತ್ರಿಯನ್ನು ಆಗ್ರಹಿಸಿರುವುದು ಕನ್ನಡಿಗರೆಲ್ಲರೂ ಸಂತೋಷಪಡುವ ವಿಚಾರ. ಇಂತಹ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಆದ್ಯತೆ ಮೇರೆಗೆ ತುರ್ತು ಗಮನಹರಿಸಿ ಕಾರ್ಯಪ್ರವೃತ್ತರಾಗಬೇಕು ಹಾಗೂ ರಾಜ್ಯದ ಸರ್ವ ಪಕ್ಷಗಳು ಕಾಳಜಿ, ಇಚ್ಛಾಶಕ್ತಿ ತೋರಬೇಕಿದೆ. →→

–ಶ್ರೀಧರ್ ಡಿ. ರಾಮಚಂದ್ರಪ್ಪ, ತುರುವನೂರು, ಚಿತ್ರದುರ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.