ADVERTISEMENT

ಅರ್ಹ ಸಾಧಕರಿಗೆ ಮನ್ನಣೆ ದೊರೆತಿದೆ

ಮಹದೇವ ಹಡಪದ
Published 3 ಡಿಸೆಂಬರ್ 2018, 19:45 IST
Last Updated 3 ಡಿಸೆಂಬರ್ 2018, 19:45 IST

ಪ್ರಶಸ್ತಿ ಎಂಬುದು ಅರ್ಹತೆ ಗಳಿಸಿಕೊಂಡಾಗ ಅರ್ಹರು ಆಯ್ಕೆಯಾಗಿದ್ದಾರೆ ಎಂದೇ ಅರ್ಥ. ಎಷ್ಟೋ ಸಲ ಗುರುತಿಸುವಿಕೆಯಲ್ಲಿ ಎಡರುತೊಡರಾಗಿ ಯೋಗ್ಯರ ಆಯ್ಕೆಗಳು ಆಗುವುದೇ ಇಲ್ಲ. ಈ ಸಲದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದವರಿಗೆ ಎಂದೋ ಯಾವಾಗಲೋ ಸಲ್ಲಬೇಕಾಗಿದ್ದ ಗೌರವ ಈಗ ಸಿಕ್ಕಿರುವುದು ಸಂತಸದ ಸಂಗತಿ.

ಅವಕಾಶಗಳಿಗಾಗಿ ಹಾತೊರೆಯವ ಅನೇಕರಲ್ಲಿ ಬೆಂಗಳೂರು ಕೇಂದ್ರಿತ ಸಾಂಸ್ಕೃತಿಕ ಹಿಡಿತದ ಬಗ್ಗೆ ಅಸಮಾಧಾನವಿದೆ. ಬಹಳಷ್ಟು ಕವಿಗಳು, ಕಲಾವಿದರು, ಸಾಧಕರು ‘ನಮ್ಮನ್ನು ಯಾರೂ ಗಮನಿಸಲಾರರೇನೋ‌’ ಎಂಬ ಆತಂಕದಲ್ಲಿ ನಿವೃತ್ತಿ ಆದದ್ದೇ ತಡ ಬೆಂಗಳೂರಿನತ್ತ ಹೊರಟುಬಿಡುತ್ತಾರೆ. ಸ್ಥಳೀಯವಾದ ಗುಂಪುರಾಜಕಾರಣ, ರಾಜಕೀಯ ವ್ಯಕ್ತಿಗಳ ಶಿಫಾರಸು ಹಿಡಿದುಕೊಂಡು ಎಡತಾಕುವ ಹಿರಿಯ ಜೀವಗಳನ್ನು ಕಂಡಾಗ ಮರುಕವೆನಿಸುತ್ತದೆ. ತಮ್ಮ ಬದುಕನ್ನೇ ಕೃತಿಯಾಗಿಸಿಕೊಂಡು ಎಲ್ಲೋ ಎಲೆಮರೆಯ ಧ್ಯಾನದಲ್ಲಿ ಇದ್ದುಬಿಡುವ ಹಿರಿಯ ಜೀವಗಳನ್ನು ಗುರುತಿಸಿ ಪ್ರಶಸ್ತಿ ಕೊಡುತ್ತಾರೆಯೇ...? ಅದಕಾಗಿ ನಾವು ಅಧಿಕಾರಶಾಹಿಯ ಸಮೀಪದಲ್ಲಿ ಸುಳಿದಾಡುತ್ತಿರಬೇಕು ಎಂಬಂತೆ ವರ್ತಿಸುವ ಹಲವರ ನಡುವೆ ಸದ್ದಿಲ್ಲದೆ ಸಾಧನೆ ಮಾಡಿದ ಹಿರಿಯರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ.

ಪರಿಷತ್ತು, ಅಕಾಡೆಮಿ, ಪ್ರಾಧಿಕಾರಗಳಲ್ಲಿ ಸದಸ್ಯತ್ವದಿಂದ ಹಿಡಿದು ಯೋಜನಾ ರೂಪುರೇಷೆ ತಯಾರಿ ಆಗುವವರೆಗೂ ಅಲ್ಲದೆ ಅದಕ್ಕೆ ಸಂಬಂಧಿಸಿದ ಸಂಪನ್ಮೂಲ ಬಳಕೆಯಲ್ಲೂ ಮತ್ತು ಆಯಾ ಪ್ರಶಸ್ತಿಗಳ ಹಂಚಿಕೆಯಲ್ಲೂ ಕಡು ಜಾತಿವಾಸನೆ ತುಂಬಿರುತ್ತದೆ ಎಂಬ ನಂಬುಗೆ ಸುಳ್ಳಾಗುವ ಹಾಗೆ ಇದೆ ಈ ಸಲದರಾಜ್ಯೋತ್ಸವ ಪ್ರಶಸ್ತಿ ಪಟ್ಟಿ. ಆದರೆ ಆಯ್ಕೆಯ ಮಾನದಂಡಗಳನ್ನು ರೂಪಿಸಿ ಅದನ್ನು ಪ್ರತಿವರ್ಷವೂ ಜಾರಿಗೆ ತರುವಂತಾಗಬೇಕು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.