ADVERTISEMENT

‘ವಚನಪಾಲನೆ’ಗೆ ಬೆಲೆ ಇದೆಯೇ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 2 ಫೆಬ್ರುವರಿ 2020, 15:42 IST
Last Updated 2 ಫೆಬ್ರುವರಿ 2020, 15:42 IST

ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಅನರ್ಹಗೊಂಡು, ಬಳಿಕ ಉಪಚುನಾವಣೆಯಲ್ಲಿ ಗೆದ್ದು ಬಂದ ಶಾಸಕರ ವಿಷಯದಲ್ಲಿ ‘ವಚನಪಾಲನೆ’ ಎನ್ನುವ ಪದ ಹೆಚ್ಚಾಗಿ ಬಳಕೆಯಾಗುತ್ತಿದೆ. ಇದೊಂದು ವಿಪರ್ಯಾಸ. ಸರ್ಕಾರ ತಮ್ಮ ಕ್ಷೇತ್ರದ ಅಭಿವೃದ್ಧಿಯನ್ನು ಕಡೆಗಣಿಸಿರುವುದರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದೇ ತಮಗಿರುವ ಅನಿವಾರ್ಯ ಮಾರ್ಗ; ಈ ಮೂಲಕ, ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಗೆ ಸಹಾಯ ಮಾಡುವ ಉದ್ದೇಶ ತಮ್ಮದಲ್ಲ ಎಂದು ಸ್ಪಷ್ಟ ಮಾತುಗಳಿಂದ ಇವರೆಲ್ಲ ಘೋಷಿಸಿದ್ದರು.

ಬಿಜೆಪಿ ನಾಯಕರೂ ‘ನಮಗೂ ಅತೃಪ್ತ ಶಾಸಕರಿಗೂ ಯಾವ ಸಂಬಂಧವೂ ಇಲ್ಲ, ನಾವು ಯಾವ
ಆಮಿಷವನ್ನೂ ಒಡ್ಡಿಲ್ಲ’ ಎಂದು ಬಹಿರಂಗವಾಗಿ ಹೇಳಿದ್ದರು. ಈ ಹೇಳಿಕೆಗಳೆಲ್ಲ ಈಗ ಟಿ.ವಿ ವಾಹಿನಿಗಳು ಮತ್ತು ಪತ್ರಿಕೆಗಳಲ್ಲಿ ದಾಖಲೆಯಾಗಿ ಲಭ್ಯ. ಆದರೆ ಈಗ ಉಪಚುನಾವಣೆಯಲ್ಲಿ ಸೋತ ಮತ್ತು ಗೆದ್ದ ‘ಅನರ್ಹ’ ಶಾಸಕರೆಲ್ಲರೂ ‘ಮುಖ್ಯಮಂತ್ರಿ ನಮಗೆ ಸಚಿವ ಸ್ಥಾನ ಕೊಡುವುದಾಗಿ ವಚನ ಕೊಟ್ಟಿದ್ದರು. ಈಗ ಕೊಡದೇ ಇದ್ದರೆ ವಚನಭ್ರಷ್ಟರಾಗುತ್ತೀರಿ. ಪರಿಣಾಮ ನೆಟ್ಟಗಿರುವುದಿಲ್ಲ’ ಎನ್ನುತ್ತಿದ್ದಾರೆ.

ಇತ್ತ ಮುಖ್ಯಮಂತ್ರಿ ಮತ್ತು ಕೆಲವು ಬಿಜೆಪಿ ಮುಖಂಡರೂ ‘ಅನರ್ಹರ ತ್ಯಾಗದಿಂದಲೇ ನಾವು ಅಧಿಕಾರಕ್ಕೆ ಬಂದದ್ದು. ಅವರಿಗೆ ಸಚಿವ ಸ್ಥಾನ ಕೊಡುವುದಾಗಿ ವಚನ ಕೊಟ್ಟಿದ್ದೆವು, ಈಗ ಪಾಲಿಸಬೇಕು’ ಎಂದು ಸಾರುತ್ತಿದ್ದಾರೆ. ಈ ರೀತಿ ಆಗೊಂದು ಈಗೊಂದು ಮಾತು ಹೇಳುವವರು ಕೊಟ್ಟ ವಚನಕ್ಕೆ ಏನು ಬೆಲೆ? ಇವರು ನಾಳೆ ಏನು ಮಾಡಲೂ ಸಿದ್ಧ. ಶಾಸಕರಾದವರಲ್ಲಿ ಉತ್ತಮ ಆಡಳಿತ ನೀಡುವ ಸಾಮರ್ಥ್ಯವನ್ನು ಪರಿಗಣಿಸಿ ಅಲ್ಲವೇ ಸಚಿವ ಸ್ಥಾನ ಕೊಡಬೇಕಾದುದು?

ADVERTISEMENT

- ಸತ್ಯಬೋಧ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.