ಕನ್ನಂಬಾಡಿ ಕಟ್ಟೆಯ ಸುರಕ್ಷತೆ ಮತ್ತು ಸುತ್ತಮುತ್ತಲಿನ ಗಣಿಗಾರಿಕೆಯ ಬಗ್ಗೆ ಕೆಲವು ದಿನಗಳಿಂದ ನಡೆಯುತ್ತಿರುವ ಚರ್ಚೆಯು ಜನರಿಗೆ ನಿಷ್ಪ್ರಯೋಜಕವಾದುದಾಗಿದೆ. ಒಂದು ಗಂಭೀರ ವಿಷಯವು ಮನರಂಜನೆಯ ವಿಷಯವಾಗಿರುವುದು ದುರದೃಷ್ಟಕರ. ಕನ್ನಂಬಾಡಿ ಕಟ್ಟೆಗೆ ಶೇ 1ರಷ್ಟು ಅಪಾಯ ಇದೆ ಎಂಬ ಅನುಮಾನವಿದ್ದರೂ ಸುತ್ತಮುತ್ತಲಿನ ಪ್ರದೇಶಗಳ ಗಣಿಗಾರಿಕೆ ನಿಲ್ಲಬೇಕು. ಅದಕ್ಕೆ ಪರೀಕ್ಷೆ, ತಜ್ಞರ ವರದಿ ಇಂತಹವುಗಳ ಅಗತ್ಯವೇ ಇಲ್ಲ.
ಬೃಹತ್ ಯಂತ್ರಗಳ ನೆರವಿನಿಂದ ಈಗ ನಡೆಯುತ್ತಿರುವ ಗಣಿಗಾರಿಕೆ ಹಿಂದಿನಂತಿಲ್ಲ. ರಾಜ್ಯದಾದ್ಯಂತ ಬೇರೆ ಬೇರೆ ರೀತಿಯ ಗಣಿಗಾರಿಕೆಗಳು ನಡೆಯುತ್ತಿವೆ. ಇವು ತಂದೊಡ್ಡುವ ಅಪಾಯ, ಅಧಿಕಾರಿಗಳು, ರಾಜಕಾರಣಿಗಳಿಗೆ ದೊರೆಯುತ್ತಿರುವ ಅಕ್ರಮ ಹಣ ಹಾಗೂ ಮಾಲೀಕರಿಗೆ ದೊರೆಯುತ್ತಿರುವ ಕಪ್ಪುಹಣ ಇವುಗಳಿಗೆ ಹೋಲಿಸಿದರೆ ಸರ್ಕಾರಕ್ಕೆ ದೊರೆಯು ತ್ತಿರುವ ರಾಯಧನ ಹಾಗೂ ಅದು ಸೃಷ್ಟಿಸುತ್ತಿರುವ ಉದ್ಯೋಗ ನಗಣ್ಯ. ನಮ್ಮಲ್ಲಿ ಕಪ್ಪು ಶಿಲೆಯನ್ನು ಹೊತ್ತು ಸಾಗುತ್ತಿರುವ ಟ್ರಕ್ಗಳಿಂದ ರಸ್ತೆಗೆ ತೀವ್ರ ಹಾನಿಯಾಗುತ್ತಿದೆ.
ಕಳೆದ ನಲವತ್ತು ವರ್ಷಗಳಿಂದ ನಡೆಯುತ್ತಿರುವ ಕರಿಕಲ್ಲು ಗಣಿಗಾರಿಕೆ ಇಲ್ಲಿಯ ಕಾಡು, ಪಶ್ಚಿಮಘಟ್ಟಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಿದೆ. ಯಾವಾಗ ಬೇಕಾದರೂ ಮತ್ತೂ ಹೆಚ್ಚು ಅಪಾಯ ತಂದೊಡ್ಡಬಹುದಾದ ಭೀತಿ ಇದೆ. ಈಗಲಾದರೂ ಸರ್ಕಾರ ಕೂದಲು ಸೀಳುವ ತರ್ಕವನ್ನು ಆಶ್ರಯಿಸದೆ, ಸಾಮಾನ್ಯ ತಿಳಿವಳಿಕೆ ಬಳಸಿ ಸೂಕ್ತವಾದ ಗಟ್ಟಿ ನೀತಿ ರೂಪಿಸಲಿ.
- ವೆಂಕಟರಾಜು,ಚಾಮರಾಜನಗರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.