ಇತ್ತೀಚಿನ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದ ನಂತರ ನನಗನ್ನಿಸಿದ್ದು:
ವಿಧಾನಸಭೆ ಅಥವಾ ಲೋಕಸಭೆಯ ಸದಸ್ಯನೊಬ್ಬ ತನ್ನ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಸಭಾಧ್ಯಕ್ಷರಿಗೆ ಬದಲಾಗಿ ಚುನಾವಣಾ ಆಯುಕ್ತರಿಗೆ ಸಲ್ಲಿಸುವಂತೆ ಆಗಬೇಕು. ಆಯುಕ್ತರು ಅಂಥ ಸದಸ್ಯನಿಂದ ಮುಂದಿನ ಚುನಾವಣೆಯ ವೆಚ್ಚವನ್ನು 1:3 ಅನುಪಾತದಲ್ಲಿ ವಸೂಲಿ ಮಾಡಿ, ರಾಜೀನಾಮೆ ಅಂಗೀಕರಿಸಬೇಕು.
ಪಕ್ಷಾಂತರ ನಿಷೇಧ ಕಾಯ್ದೆಯು ಒಂದು ಬೆದರುಬೊಂಬೆಯಾಗಿದೆ. ಪಕ್ಷವು ತನ್ನ ಅಭ್ಯರ್ಥಿಗಾಗಿ ಮಾಡಿರುವ ವೆಚ್ಚವನ್ನು ಪಡೆದು, ಅವನನ್ನು ಕಾಯ್ದೆಯಿಂದ ಮುಕ್ತನನ್ನಾಗಿಸಬಹುದು. ಸಾಧ್ಯವಾದರೆ, ಈ ಕಾಯ್ದೆಯನ್ನೇರದ್ದುಪಡಿಸಬಹುದು. ಹೀಗಾದರೆ ಹೊಡೆದಾಟ, ಬಡಿದಾಟ, ರೆಸಾರ್ಟ್ ವಲಸೆ, ಅನ್ಯರಾಜ್ಯ ವಾಸ್ತವ್ಯ, ಅನ್ಯಪಕ್ಷಗಳ ಒತ್ತಡ, ಕುರುಡು ಕಾಂಚಾಣ, ನ್ಯಾಯಾಲಯಕ್ಕೆ ಮೊರೆ... ಇಂಥವೆಲ್ಲ ಕೊನೆಗೊಳ್ಳುವ ಅವಕಾಶವಿದೆ.
ಸಂವಿಧಾನದತ್ತ ಅಧಿಕಾರವನ್ನು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸಿ, ‘ನ್ಯಾಯಾಲಯಗಳು ಮಧ್ಯ ಪ್ರವೇಶಿಸುವಂತಿಲ್ಲ’ ಎನ್ನುವ ಸಭಾಧ್ಯಕ್ಷರುಗಳ ಅಧಿಕಾರವನ್ನು ಸದನ ನಡೆಸುವಷ್ಟಕ್ಕೇಸೀಮಿತಗೊಳಿಸಿದರೆ, ಅವರನ್ನು ರಾಜಕೀಯ ಪಕ್ಷಗಳು ತಮಗೆ ಬೇಕಾದಂತೆ ದುರ್ಬಳಕೆ ಮಾಡಿಕೊಳ್ಳುವುದಕ್ಕೆ ಕಡಿವಾಣ ಬೀಳುತ್ತದೆ. ಸಂವಿಧಾನ ತಜ್ಞರು, ಕಾನೂನು ಪಂಡಿತರು ಈ ಬಗ್ಗೆ ಯೋಚಿಸಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಬೇಕು.
–ಎನ್.ನರಹರಿ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.