ADVERTISEMENT

ಕಾಯಂ ವ್ಯವಸ್ಥೆಗೆ ಸ್ವಪ್ರಯತ್ನವಿರಲಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 19:30 IST
Last Updated 8 ಆಗಸ್ಟ್ 2021, 19:30 IST

‘ಇಂಟರ್ನೆಟ್ ಮಾತ್ರ ನಂಬಿ ಬದುಕಲಾದೀತೇ?’ ಎಂಬ ಕ್ಯಾಪ್ಟನ್ ಜಿ.ಆರ್. ಗೋಪಿನಾಥ್‌ ಅವರ ಲೇಖನ
(ಪ್ರ.ವಾ., ಆ. 5) ಬಹಳ ಮಹತ್ವದ ವಿಷಯವನ್ನು ಪ್ರಸ್ತಾಪಿಸುತ್ತದೆ. ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಉತ್ಪಾದಕ ಮತ್ತು ಗ್ರಾಹಕರಿಗಿಂತ ಮಧ್ಯವರ್ತಿಗಳು, ವ್ಯವಹಾರಸ್ಥರು ಹೆಚ್ಚಿನ ಲಾಭ ಹೊಂದುತ್ತಾರೆ ಎನ್ನುವುದು ಸಾಮಾನ್ಯ ಗ್ರಹಿಕೆ. ವ್ಯಾಪಾರಸ್ಥರು ಯಾವಾಗಾದರೂ ನಷ್ಟ ಅನುಭವಿಸಿದರೂ ಒಂದು ಅವಧಿಯ ನಂತರ ಲಾಭ ಮಾಡಿಕೊಳ್ಳುತ್ತಾರೆ.ಇದಕ್ಕೆ ಕಾರಣ, ತಮ್ಮ ವ್ಯಾಪಾರಕ್ಕೆ ಸಂಬಂಧಿಸಿದಂತೆ ಅವರು ಪಡೆಯುವ ಮಾಹಿತಿ ಮತ್ತು ಅಂಕಿಅಂಶ. ಆದರೆ ಇಂತಹ ಮಾಹಿತಿ, ದತ್ತಾಂಶವನ್ನು ಪಡೆಯಲಾಗದ ರೈತರು ಸದಾ ನಷ್ಟವನ್ನೇ ಕಾಣುತ್ತಾರೆ.

‘ಮೌಲ್ಯ ಇರುವ (ಉಪಯುಕ್ತ) ಎಲ್ಲವನ್ನೂ ಹಳ್ಳಿಗಳಲ್ಲಿ ಉತ್ಪಾದಿಸಲಾಗುತ್ತಿದೆ ಎಂದಾದರೆ, ಹಳ್ಳಿಗಳು ಬಡತನ ದಲ್ಲಿ ಇರುವುದು ಏಕೆ? ನಗರಗಳು ಶ್ರೀಮಂತಿಕೆಯಿಂದ ತುಂಬಿರುವುದು ಹೇಗೆ’ ಎಂಬುದು ಲಿಯೊ ಟಾಲ್‌ಸ್ಟಾಯ್ ಅವರ ಪ್ರಶ್ನೆ. ಇದಕ್ಕೆ ಕಾರಣ ಅಸಂಘಟನೆ ಮತ್ತು ಮಾಹಿತಿಯ ಕೊರತೆ. ಇವು ರೈತರ ಬದುಕನ್ನು ಹಾಳುಗೆಡವುತ್ತಿವೆ. ಅಲ್ಲದೆ ಖರೀದಿದಾರರಿಗೆ ಏನು ಅಗತ್ಯ ಎನ್ನುವ ಅರಿವು ರೈತರಿಗಿಲ್ಲ. ಕೃಷಿಯನ್ನು ಸಾಂಪ್ರದಾಯಿಕ ರೀತಿಯಲ್ಲಿ ನಡೆಸುತ್ತಿರುವುದೂ ಕಾರಣವಾಗಿದೆ. ರೈತರ ಜೀವನ ಹಸನಾಗಲು ಅವರಿಗೆ ಮಾರುಕಟ್ಟೆಯಲ್ಲಿ ಬೆಲೆಗಳ ಏರಿಳಿತದ ಮಾಹಿತಿ, ಹವಾಮಾನದ ಮುನ್ಸೂಚನೆ, ಗ್ರಾಹಕರ ಅಭಿರುಚಿಗಳಲ್ಲಿನ ಬದಲಾವಣೆಯಂತಹ ಮಾಹಿತಿ ಸರಿಯಾಗಿ ಸಿಗಬೇಕು. ಸಹಕಾರಿ ತತ್ವದ ಅಡಿ ಉತ್ಪಾದಕ ಮತ್ತು ಮಾರಾಟ ಸಂಘಗಳನ್ನು ಸ್ವತಃ ರೈತರು ಏರ್ಪಡಿಸಿಕೊಳ್ಳಬೇಕು. ಸಹಕಾರಿ ಬೇಸಾಯ ಮತ್ತು ಸಮುದಾಯ ಕೃಷಿಗೆ ಸರ್ಕಾರ ಉತ್ತೇಜಿಸಬೇಕು. ಆಧುನಿಕ ಮೊಬೈಲ್ ಗ್ಯಾಜೆಟ್ ಬಳಸಿ ಗ್ರಾಹಕರೊಂದಿಗೆ ನೇರ ಮಾರಾಟ ವ್ಯವಸ್ಥೆ ನಿರ್ಮಿಸಿಕೊಳ್ಳಬೇಕು. ವಿದೇಶಿ ಮಾರುಕಟ್ಟೆಗೆ ಲಗ್ಗೆ ಹಾಕಿದರೆ ಫಲಿತಾಂಶ ಇನ್ನೂ ಉತ್ತಮ ಆಗಿರುತ್ತದೆ. ಅಮೆಜಾನ್, ಜೊಮ್ಯಾಟೊ ಇತ್ಯಾದಿಗಳು ತಾತ್ಕಾಲಿಕ ನೀರ್ಗುಳ್ಳೆಗಳು. ಕೊರೊನಾ ಸಂದರ್ಭದಲ್ಲಿ ನಗರಗಳಿಂದ ಗ್ರಾಮಗಳಿಗೆ ಹಿಂತಿರುಗಿ ಕೃಷಿ ಬದುಕಿಗೆ ಒಗ್ಗಿಕೊಂಡಿರುವುದು ಸಹಜತೆಗೆ, ಕಾಯಂ ವ್ಯವಸ್ಥೆಗೆ ನಿದರ್ಶನ.

ಬಿ.ಆರ್.ಅಣ್ಣಾಸಾಗರ,ಸೇಡಂ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.