ಜನರ ಮತಗಳ ಆಧಾರದಲ್ಲಿ ಅಧಿಕಾರ ಪಡೆದ ಜನಪ್ರತಿನಿಧಿಯೊಬ್ಬ, ಮತದಾರರ ಹಿತಾಸಕ್ತಿಗೆ ಧಕ್ಕೆ ಆಗದಂತೆ ಕಾರ್ಯ ನಿರ್ವಹಿಸಬೇಕು. ಅದು ಅವನ ಜವಾಬ್ದಾರಿ. ಆದರೆ ಈಗ ಆಗುತ್ತಿರುವುದೇನು? ಮತದಾರನ ಹಿತಾಸಕ್ತಿ ಕಾಪಾಡುವುದಿರಲಿ, ಜನಪ್ರತಿನಿಧಿಗಳು ಅಧಿಕಾರ ಸಿಕ್ಕಿದೊಡನೆಯೇ ತಮ್ಮ ಮಾನ– ಮರ್ಯಾದೆಯನ್ನೂ ಲೆಕ್ಕಿಸದೆ ಸಂಪತ್ತು ಕೂಡಿಡಲು ಪ್ರಾರಂಭಿಸುತ್ತಾರೆ. ಪಕ್ಷಾಂತರ, ರಾಜೀನಾಮೆ, ವಿಪ್ ಉಲ್ಲಂಘನೆ, ಪಕ್ಷ ವಿರೋಧಿ ಚಟುವಟಿಕೆ... ಇವೆಲ್ಲವೂ ಭ್ರಷ್ಟಾಚಾರದ ಬೇರೆ ಬೇರೆ ಮುಖಗಳೇ ಆಗಿವೆ.
ಮತ ನೀಡಿದ ನಂತರ ಮತದಾರ ಅಸಹಾಯಕ. ಜನಪ್ರತಿನಿಧಿಯು ತನ್ನ ಇಚ್ಛೆಗೆ ವಿರುದ್ಧವಾಗಿ ನಡೆದರೂ ಆತ ಏನೂ ಮಾಡಲಾಗುವುದಿಲ್ಲ. ಮುಂದಿನ ಚುನಾವಣೆಯವರೆಗೆ ಕಾಯಲೇಬೇಕಾದುದು ಅನಿವಾರ್ಯ. ಆದರೆ ಅಷ್ಟರಲ್ಲೇ ಆತನ ಕೋಪ, ತಾಪಗಳು ತಣ್ಣಗಾಗಿ, ಚುನಾವಣೆಯಲ್ಲಿ ಯಾರಿಗೋ ಒಬ್ಬರಿಗೆ ಮತ ಹಾಕಿ ಬರುತ್ತಾನೆ. ಜನಪ್ರತಿನಿಧಿಯು ವಾಮಮಾರ್ಗವನ್ನು ಅನುಸರಿಸಲು ಇದು ಕಾರಣವಾಗುತ್ತದೆ. ಜನರ ಈ ಅಸಹಾಯಕತೆಯನ್ನು ದೂರ ಮಾಡಲು, ಶಾಸಕತ್ವವನ್ನು ರದ್ದು ಮಾಡುವುದಕ್ಕೆ ಸಾಧ್ಯವಾಗುವಂತಹ ಅವಕಾಶವನ್ನು ಅವರಿಗೆ ನೀಡುವುದು ಸೂಕ್ತ. ಇಂಥ ಹಕ್ಕು ಮತದಾರನಿಗೆ ಸಿಕ್ಕಿದರೆ ಮಾತ್ರ ಪ್ರಜಾಪ್ರತಿನಿಧಿಯ ಮೂಗುದಾರ ಮತದಾರನ ಕೈಗೆ ಬರುತ್ತದೆ.
-ಗಣಪತಿ ಎಂ.ನಾಯ್ಕ, ಕಾನಗೋಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.