ಶುಲ್ಕ ರಿಯಾಯಿತಿ ಪಡೆದು ಎಂಬಿಬಿಎಸ್ ಪದವಿ ಮುಗಿಸಿದ ವೈದ್ಯರು ಗ್ರಾಮೀಣ ಸೇವೆ ಮಾಡುವುದು ಕಡ್ಡಾಯ. ಅದಕ್ಕೆ ವಿನಾಯಿತಿ ಕೋರಿ ಕೋರ್ಟ್ ಮೆಟ್ಟಿಲು ಹತ್ತಿದ್ದು ಸರಿಯಲ್ಲ. ಕೋರ್ಟ್ ಕೂಡಾ ವಿನಾಯಿತಿ ನಿರಾಕರಿಸಿ, ಸೂಕ್ತ ಅಭಿಪ್ರಾಯ ವ್ಯಕ್ತಪಡಿಸಿದೆ (ಪ್ರ.ವಾ., ಜುಲೈ 22). ಈಗತಾನೆ ವೈದ್ಯ ವೃತ್ತಿ ಆರಂಭಿಸುವ ಯುವ ವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಇರುವ ಆರೋಗ್ಯ ವ್ಯವಸ್ಥೆಯನ್ನು ಸ್ವತಃ ನೋಡಬೇಕಾಗುತ್ತದೆ. ಹಳ್ಳಿಯ ಜನರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಎಷ್ಟು ಅನಿವಾರ್ಯವಾಗಿರುತ್ತದೆ ಎಂಬುದನ್ನು ಅರಿಯಬೇಕಾಗುತ್ತದೆ. ವೃತ್ತಿಯ ಆರಂಭದಲ್ಲಿ ಬಡಜನರ ಸೇವೆ ಮಾಡಬೇಕಾದುದು ಅತ್ಯವಶ್ಯಕ.
ಸಮಾಜದ ಸ್ವಾಸ್ಥ್ಯ ಕಾಪಾಡುವ ದಿಸೆಯಲ್ಲಿ ಯುವ ವೈದ್ಯರ ಪಾತ್ರ ಅತ್ಯಂತ ಮುಖ್ಯವಾದುದು. ಹಳ್ಳಿಯಿಂದಲೇ ವೃತ್ತಿಜೀವನ ಪ್ರಾರಂಭಿಸಿದರೆ ಮುಂದಿನ ದಿನಗಳಲ್ಲಿ ತಮ್ಮ ವೈದ್ಯಕೀಯ ವೃತ್ತಿಗೆ ಭದ್ರ ಅಡಿಪಾಯ ಸಿಗುತ್ತದೆ. ಉಚಿತ ಮತ್ತು ಸುಸ್ಥಿರ ಆರೋಗ್ಯ ಸೇವೆ ಎಲ್ಲರಿಗೂ ಲಭ್ಯವಾದರೆ ದೇಶ ಸುಭಿಕ್ಷ ಆಗುತ್ತದೆ ಎಂಬುದನ್ನು ಯುವ ವೈದ್ಯರು ಅರಿಯಬೇಕಿದೆ.
ವಿ.ತಿಪ್ಪೇಸ್ವಾಮಿ,ಹಿರಿಯೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.