ADVERTISEMENT

ವಾಚಕರ ವಾಣಿ| ಕನ್ನಡ: ಕಳಚಬೇಕಿದೆ ಶುದ್ಧತೆಯ ಬಂಧನ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2021, 19:30 IST
Last Updated 31 ಡಿಸೆಂಬರ್ 2021, 19:30 IST

ಸೃಜನಶೀಲ ಭಾಷೆಗಳು ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಉಚ್ಚಾರಣೆ ಮತ್ತು ಪದ ಪ್ರಯೋಗಗಳಲ್ಲಿ ಬದಲಾಗುವುದು ಸ್ವಾಭಾವಿಕವೆಂಬ ಅರಿವು ಇಂದು ಸಾಮಾನ್ಯವಾಗಿದೆ. ಕನ್ನಡದಲ್ಲಿ, ಆಡುವ ಭಾಷೆ ಶುದ್ಧವಾಗಿರಬೇಕೆಂಬ ಅಭಿಪ್ರಾಯ ಇಂದು ಬಲಗೊಳ್ಳುತ್ತಿದೆ. ಆದರೆ ಶುದ್ಧ ಭಾಷೆಯೆಂದರೆ ಯಾವುದು? ಬರವಣಿಗೆಯ ಕನ್ನಡವೇ? ಪಾಣಿನಿ, ಪಿಂಗಳ ಮತ್ತಿತರ ವ್ಯಾಕರಣಕಾರರು ಸಂಸ್ಕೃತವನ್ನು ಹಲವು ಸೂತ್ರಗಳಲ್ಲಿ ಬಂಧಿಸಿ ಅದನ್ನು ಬರೀ ಕಲಿತವರಿಗೆ ಸೀಮಿತ ಗೊಳಿಸಿದ್ದು ಭಾರತದಲ್ಲಿ ಶುದ್ಧ ಭಾಷೆಯೆನ್ನುವ ಭ್ರಮೆ ಮೂಡಲು ಕಾರಣ. ಭಾಷೆ ಎಲ್ಲರಿಗೂ ಸುಲಭವಾಗಿ ದಕ್ಕದೆನ್ನುವ ಕಲಿತವರ ಅಹಂಕಾರ ಮತ್ತು ಕಲಿಯದವರ ಕಡೆಗಿನ ಪೂರ್ವಗ್ರಹಗಳು ಈ ಭ್ರಮೆಯನ್ನು ಜೀವಂತವಾಗಿಟ್ಟಿವೆ. ಇಂತಹ ಶುದ್ಧತೆಯ ಅವಶ್ಯಕತೆಯಿಂದಲೇ ಆರಂಭಿಕ ಕನ್ನಡದ ಬರವಣಿಗೆಗಳು ಜನಸಾಮಾನ್ಯರನ್ನು ದೂರವಿಟ್ಟವು.

19ನೇ ಶತಮಾನದ ಉತ್ತರ ಭಾಗದಿಂದ ಕನ್ನಡ ಬರವಣಿಗೆ ಸರಳಗೊಂಡು ಜನಸಾಮಾನ್ಯರಿಗೆ ಹತ್ತಿರವಾದರೂ ಅದು ಹೆಚ್ಚಾಗಿ ಪುಸ್ತಕ ಮತ್ತು ಮಾಧ್ಯಮಗಳಿಗೆ ಸೀಮಿತವಾಗಿದೆ. ಮೌಖಿಕ ಸಂವಹನೆಯಲ್ಲಿ ಹೆಚ್ಚಾಗಿ ಬಳಸದ ಈ ಭಾಷೆಯನ್ನೇ ಪ್ರಮಾಣಿತ ಕನ್ನಡವಾಗಿ ಏಕೆ ಬಳಸಬೇಕು? ಶುದ್ಧತೆಯ ಭರದಲ್ಲಿ ನಾವು ಆಡುಭಾಷೆಗಳನ್ನು ನಿರ್ಲಕ್ಷಿಸಿದ ಪರಿಣಾಮ, ಇಂದು ಕೆಲವು ಗ್ರಾಮ್ಯ ಕನ್ನಡವನ್ನು ಕೇಳಿದಾಗ ‘ಇವು ಕನ್ನಡವೇ’ ಎಂದು ಅನುಮಾನ ಹುಟ್ಟುವಂತಾಗಿದೆ. ಉಪಭಾಷೆಗಳ ವಿಭಿನ್ನ ಉಚ್ಚಾರ ಮತ್ತು ಪದಪ್ರಯೋಗಗಳು ನಮ್ಮಲ್ಲಿ ಕುತೂಹಲ ಮೂಡಿಸ ಬೇಕೇ ವಿನಾ ತಿರಸ್ಕಾರವನ್ನಲ್ಲ. ಆಡುಭಾಷೆಗಳು ಶುದ್ಧವಾಗುವ ಬದಲು ಕನ್ನಡವೇ ಶುದ್ಧತೆಯ ಬಂಧನ ಕಳಚಿ ಕೊಂಡರೆ ಒಳಿತು.

- ಸುನೀಲ ನಾಯಕ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.