ಮೈಸೂರು ರಂಗಾಯಣದ ಈಗಿನ ನಿರ್ದೇಶಕರನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯನ್ನು ಪಟ್ಟಭದ್ರ ಹಿತಾಸಕ್ತಿಗಳ ಕಾರ್ಯವೆಂದು ಖಂಡಿಸಿ, ಈಗಿನ ನಿರ್ದೇಶಕರನ್ನು ಬೆಂಲಿಸುವುದಾಗಿ ಕೊಡವ ಸಮಾಜದ ಹೆಸರಿನಲ್ಲಿ ಪ್ರಕಟವಾಗಿರುವ ಹೇಳಿಕೆಯು (ಪ್ರ.ವಾ., ಡಿ. 26) ದುರದೃಷ್ಟಕರ. ಸ್ವಾಯತ್ತತೆಯನ್ನು ಹೊಂದಿರುವ ರಂಗಾಯಣವನ್ನು ಸದ್ಯದ ನಿರ್ದೇಶಕರು ಸಂಘ ಪರಿವಾರದ ಸಂಘಟನೆಯನ್ನಾಗಿ ಪರಿವರ್ತಿಸುತ್ತಿರುವುದರ ವಿರುದ್ಧ ಪ್ರತಿಭಟನೆ ನಡೆಯುತ್ತಿದೆಯೇ ಹೊರತು, ಅವರು ಕೊಡವರು ಎಂಬ ಕಾರಣಕ್ಕಾಗಿ ಅಲ್ಲ. ಪಂಜೆ ಮಂಗೇಶರಾಯರ ‘ಹುತ್ತರಿಯ ಹಾಡು’, ರಾಜರತ್ನಂ ಅವರ ‘ಮಡಕೇರೀಲಿ ಮಂಜು’ ಓದಿದವರಿಗೆ, ಕೊಡಗಿನ ಸುಪುತ್ರ- ಸುಪುತ್ರಿಯರಾದ ಐ.ಮಾ.ಮುತ್ತಣ್ಣ, ಜನರಲ್ ಕಾರಿಯಪ್ಪ, ಕೊಡಗಿನ ಗೌರಮ್ಮ ಮೊದಲಾದ ಸುಸಂಸ್ಕೃತ ಮನಸ್ಸುಗಳನ್ನು ಬಲ್ಲವರಿಗೆ ಈಗಿನ ನಿರ್ದೇಶಕರ ಮಾತು, ನಡವಳಿಕೆ, ಧೋರಣೆಗಳು ವಿಷಾದ ಹುಟ್ಟಿಸುತ್ತವೆ. ಇಂಥವರನ್ನು ತಿಳಿದೋ ತಿಳಿಯದೆಯೋ ಕೊಡವರ ಹೆಸರಿನಲ್ಲಿ ಬೆಂಬಲಿಸುವವರನ್ನು, ‘ಕಾವೇರಮ್ಮೆ ದೇವಿ ತಾಯೆ ಕಾಪಾಡೆಂಗಳಾ..’ ಎಂದು ಪ್ರಾರ್ಥಿಸಬೇಕೆನ್ನಿಸುತ್ತದೆ.
- ವಿ.ಎನ್.ಲಕ್ಷ್ಮೀನಾರಾಯಣ,ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.