ಹಿಂದೆ, ಗಣೇಶನ ಹಬ್ಬ ಎಂದರೆ ಊರಿನ ಸಮಸ್ತರಿಗೂ ಸಂಭ್ರಮ. ಅವರವರ ಸಾಮರ್ಥ್ಯ ಅನುಸಾರ ಮೂರು ದಿನ, ಐದು ದಿನ, ಏಳು ದಿನ ಗಣೇಶನನ್ನು ಕೂರಿಸಿ ಪ್ರತಿದಿನ ರಾತ್ರಿ ಹರಿಕಥೆ, ಭಜನೆ, ಕೋಲಾಟ, ಗೀತಗಾಯನ ಹೀಗೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದರು.ಜೊತೆಗೆ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಗಂಡಸರಿಗೆ ಭಾರ ಎತ್ತುವ ಸ್ಪರ್ಧೆ ನಡೆಸುತ್ತಿದ್ದರು. ಧ್ವನಿವರ್ಧಕದಲ್ಲಿ ಎಲ್ಲರೂ ಕೇಳುವಂತಹ ಹಾಡುಗಳು, ಕಥೆಗಳು ಕೇಳಿಬರುತ್ತಿದ್ದವು. ಊರಿನಲ್ಲಿ ಸಾಂಸ್ಕೃತಿಕ ವಾತಾವರಣ ಇರುತ್ತಿತ್ತು. ಗಣೇಶನನ್ನು ವಿಸರ್ಜಿಸುವ ದಿನ ಊರೆಲ್ಲಾ ಮೆರವಣಿಗೆ ಮಾಡಿ ಶಾಂತ ರೀತಿಯಲ್ಲಿ ಗಣೇಶನನ್ನು ವಿಸರ್ಜಿಸುತ್ತಿದ್ದರು.
ಆದರೆ ಈಗ ಎಲ್ಲವೂ ಬದಲಾಗಿದೆ. ಒಂದಷ್ಟು ಪಡ್ಡೆ ಹುಡುಗರು ಸೇರಿಕೊಂಡು ಬೀದಿಗೊಂದು ಕೇರಿಗೊಂದು ಗಣೇಶನನ್ನು ಕೂರಿಸುತ್ತಾರೆ. ಕರ್ಕಶವಾದ ಯಾವುದೋ ಹಾಡನ್ನು ಹಾಕಿಕೊಂಡು ಮನಬಂದಂತೆ ಕುಣಿಯುತ್ತಾರೆ. ಕುಡಿದು ಅಸಭ್ಯವಾಗಿ ವರ್ತಿಸುತ್ತಾರೆ. ಯಾರಾದರೂ ಹಿರಿಯರು ತಿಳಿವಳಿಕೆ ಹೇಳಲು ಹೋದರೆ ಅವರಿಗೆ ತಿರುಗಿ ಬೀಳುತ್ತಾರೆ. ಸಾಂಸ್ಕೃತಿಕ- ಸಾತ್ವಿಕ ಚಟುವಟಿಕೆಗಳಿಗೆ ಇಲ್ಲಿ ಅವಕಾಶವಿಲ್ಲ. ಇವನ್ನೆಲ್ಲ ಗಮನಿಸಿದಾಗ ನಮ್ಮ ಯುವಪೀಳಿಗೆ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಎದುರಾಗುತ್ತದೆ.
– ಸಾ.ಮ.ಶಿವಮಲ್ಲಯ್ಯ,ಸಾಸಲಾಪುರ, ಕನಕಪುರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.