ADVERTISEMENT

ವಾಚಕರ ವಾಣಿ| ತನಿಖಾ ಸಂಸ್ಥೆಗಳ ಮೇಲೆ ಪರೋಕ್ಷ ಒತ್ತಡ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 19:30 IST
Last Updated 23 ಜೂನ್ 2022, 19:30 IST

‘ಕೇಂದ್ರದ ತನಿಖಾ ಸಂಸ್ಥೆಗಳು ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಅವರಿಗೆ ಕಿರುಕುಳ ನೀಡುತ್ತಿವೆ. ಎಂದೋ ಮುಕ್ತಾಯಗೊಂಡ ಪ್ರಕರಣದ ವಿಚಾರಣೆ ನಡೆಸಲಾಗುತ್ತಿದೆ. ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ನಯಾಪೈಸೆ ಪಡೆದಿಲ್ಲ, ಯಾವುದೇ ತಪ್ಪು ಇಲ್ಲ. ತನಿಖಾ ಸಂಸ್ಥೆಗಳನ್ನು ಬಿಜೆಪಿ ನೇತೃತ್ವದ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಎಂದು ಆರೋಪಿಸಿ ಕರ್ನಾಟಕದ ಕಾಂಗ್ರೆಸ್‌ ನಾಯಕರು ದೆಹಲಿಯಲ್ಲಿ ‘ಶಕ್ತಿ ಪ್ರದರ್ಶನ’ ಮಾಡಿದ್ದಾರೆ (ಪ್ರ.ವಾ., ಜೂನ್‌ 23). ಯಾವುದೇ ವಿರೋಧ ಪಕ್ಷ ಆರೋಪಿಸುವುದು ಅಥವಾ ಆಡಳಿತಾರೂಢ ಪಕ್ಷ ಆ ರೀತಿ ನಡೆದುಕೊಳ್ಳುತ್ತಾ ಬಂದಿರುವುದು ಸಾಮಾನ್ಯ ಎನ್ನುವಂತಾಗಿದೆ.

ತಮಗೂ ಕಿರುಕುಳ ನೀಡಲಾಗಿತ್ತು ಎಂದು ಡಿ.ಕೆ.ಶಿವಕುಮಾರ್‌, ರಾಜಕೀಯ ದುರುದ್ದೇಶ ಎಂದು ಸಿದ್ದರಾಮಯ್ಯ, ಇದಕ್ಕೆಲ್ಲ ತಮ್ಮ ಪಕ್ಷ ಹೆದರುವುದಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಈ ನಾಯಕರೇ ಹೇಳುವಂತೆ ತಮ್ಮ ನಾಯಕರು ಪರಿಶುದ್ಧರಾಗಿದ್ದಾರೆ ಎಂದಾದರೆ ಬೀದಿಗಿಳಿದು ಹೋರಾಡುವ ಅಗತ್ಯ ಏನಿದೆ? ತನಿಖೆಯ ನಂತರ ಆರೋಪ ಸಾಬೀತಾಗಿಲ್ಲ ಎಂದು ತಿಳಿದ ಬಳಿಕ ಹೋರಾಟ ನಡೆಸಿದ್ದರೆ ಅದಕ್ಕೊಂದು ಅರ್ಥ ಇರುತ್ತಿತ್ತು. ಭ್ರಷ್ಟಾಚಾರದ ಪ್ರಕರಣಗಳಿಗೆ ಸಂಬಂಧಿಸಿ ಕಾನೂನು ಕ್ರಮಗಳು ಜರುಗಿದಾಗ ಬಿಜೆಪಿ, ಕಾಂಗ್ರೆಸ್‌ ಒಳಗೊಂಡಂತೆ ಯಾವುದೇ ಪಕ್ಷವು ಬಡಬಡಿಸಿ, ತನಿಖಾ ಸಂಸ್ಥೆಗಳ ಮೇಲೆ ಪರೋಕ್ಷವಾಗಿ ಒತ್ತಡ ಹೇರುವುದು ಜನರಿಗೆ ತಿಳಿಯದ ಸಂಗತಿಯೇನಲ್ಲ.

ನಾರಾಯಣರಾವ ಕುಲಕರ್ಣಿ,ಹಿರೇಅರಳಿಹಳ್ಳಿ, ಯಲಬುರ್ಗಾ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.