ಶ್ರೀರಂಗಪಟ್ಟಣದ ಡಿವೈಎಸ್ಪಿ ಯೋಗೇಂದ್ರನಾಥ್ ಅವರು ಆತ್ಮಹತ್ಯೆಗೆ ಯತ್ನಿಸಿರುವುದು ವರದಿಯಾಗಿದೆ (ಪ್ರ.ವಾ., ಅ.14). ಶಾಸಕ ಪರಮೇಶ್ವರ ಅವರ ಆಪ್ತ ಸಹಾಯಕ ರಮೇಶ್, ಎಸ್.ಎಂ.ಕೃಷ್ಣ ಅವರ ಅಳಿಯ ‘ಕಾಫಿ ಡೇ’ ಸಿದ್ಧಾರ್ಥ, ಡಿವೈಎಸ್ಪಿಯಾಗಿದ್ದ ಕೊಡಗಿನ ಗಣಪತಿ ಭಟ್, ಜಿಲ್ಲಾಧಿಕಾರಿಯಾಗಿದ್ದ ಡಿ.ಕೆ.ರವಿ ಮುಂತಾದವರು ಆತ್ಮಹತ್ಯೆಗೆ ಶರಣಾದರು. ಯಾವುದೇ ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ, ಅಲ್ಲಿಯವರೆಗೂ ತಾಳ್ಮೆ ಇರಬೇಕು. ಇಂದು ಅನೇಕರು ಸಣ್ಣಪುಟ್ಟ ಕಾರಣ ಗಳಿಗೂ ಆತ್ಮಹತ್ಯೆ ಮಾಡಿಕೊಳ್ಳುವ ಮನಃಸ್ಥಿತಿಗೆ ಒಳಗಾಗುತ್ತಿರುವುದು ನೋವಿನ ಸಂಗತಿ.
ಸಂಕಷ್ಟಗಳಿದ್ದರೂ ಅವುಗಳಿಂದ ಹೊರಬಂದು ಬದುಕು ಸಾಗಿಸುತ್ತಿರುವ ಹಲವರ ಉದಾಹರಣೆಗಳು ಸಮಾಜದಲ್ಲಿ ಇವೆ. ಅವನ್ನು ಗಮನಿಸಬೇಕು. ಆತ್ಮಹತ್ಯೆ ಮಾಡಿಕೊಳ್ಳುವವರು ಸಮಾಜಕ್ಕೆ ಯಾವ ಸಂದೇಶವನ್ನು ನೀಡುತ್ತಿದ್ದಾರೆ? ಸಾವೊಂದೇ ಎಲ್ಲಕ್ಕೂ ಪರಿಹಾರವಲ್ಲ. ಇದ್ದು ಸಾಧಿಸಬೇಕು. ಸಾಧಿಸಿ ತೋರಿಸಬೇಕು ಹಾಗೂ ಮಾದರಿಯಾಗಬೇಕು. ಸಮಾಜಕ್ಕೆ ಆಧಾರಸ್ತಂಭವಾದ ಇಂತಹವರೇ ಈ ದಾರಿ ತುಳಿದರೆ, ಅವರನ್ನೇ ನಂಬಿದ ಕುಟುಂಬದವರ ಗತಿಯೇನು? ಇಂತಹ ಕಠಿಣ ನಿರ್ಧಾರಕ್ಕೆ ಯಾರೂ ಬಾರದಿರಲಿ.
- ಪತ್ತಂಗಿ ಎಸ್. ಮುರಳಿ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.