ಸುಮಾರು ಹದಿನಾರು ತಿಂಗಳ ರಾಜಕೀಯ ಅಸ್ಥಿರತೆಯ ಕೊಂಡಿ ಕಳಚಿ ಕರ್ನಾಟಕದಲ್ಲಿ ಸರ್ಕಾರಕ್ಕೆ ಭದ್ರತೆ ಬಂದಿದೆ. ಅತಿಹೆಚ್ಚು ಸ್ಥಾನ ಗಳಿಸಿದ ಪಕ್ಷವನ್ನು ದೂರವಿಟ್ಟು ಕಾಂಗ್ರೆಸ್ ಮತ್ತು ಜೆಡಿಎಸ್ ಕೂಡಿ ಸರ್ಕಾರ ರಚಿಸಿದ್ದವು. ಆದರೆ ಅವರಲ್ಲಿ ಸಮನ್ವಯ ಇಲ್ಲದ ಕಾರಣ ಮೈತ್ರಿ ಸರ್ಕಾರವನ್ನು ಉದ್ದಕ್ಕೂ ಅಸ್ಥಿರತೆ ಕಾಡಿತು. ಅಭಿವೃದ್ಧಿ ಕಾರ್ಯಗಳ ಮೇಲೂ ಅದರ ಪರಿಣಾಮ ಉಂಟಾಯಿತು.
ಆ ಬಳಿಕ, ಶಾಸಕರ ರಾಜೀನಾಮೆಯ ಪ್ರಹಸನ ಎಲ್ಲರಿಗೂ ತಿಳಿದಿರುವಂತಹುದೆ. ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿತು. ಬಿಜೆಪಿಯು ಚುಕ್ಕಾಣಿ ಹಿಡಿಯಿತು. ಈಗ ಉಪಚುನಾವಣೆ ಫಲಿತಾಂಶ ಹೊರಬಿದ್ದಿದೆ. 12 ಕ್ಷೇತ್ರಗಳಲ್ಲಿ ಗೆದ್ದು ಬಿಜೆಪಿ ಬಲ ಹೆಚ್ಚಿಸಿಕೊಂಡಿದೆ. ಸ್ಥಿರತೆಗಾಗಿ ಮತದಾರರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಆ ಸಂದೇಶವನ್ನು ಸರ್ಕಾರ ಅರಿತು ನಡೆದುಕೊಳ್ಳಬೇಕಿದೆ.
ಉಳಿದಮೂರೂವರೆ ವರ್ಷವಾದರೂ ಜನಪರವಾದ ಆಡಳಿತ ನೀಡಲು ಸರ್ಕಾರ ದೃಢ ಹೆಜ್ಜೆ ಇಡಬೇಕು. ಸರ್ಕಾರದ ಮುಂದೆ ಸವಾಲುಗಳ ರಾಶಿಯೇ ಇದೆ. ಉತ್ತರ ಕರ್ನಾಟಕದಲ್ಲಿ ಪ್ರಕೃತಿ ವಿಕೋಪದಿಂದಾಗಿ ಜನ ತತ್ತರಿಸಿದ್ದಾರೆ. ಅವರಿಗೆ ಪುನರ್ವಸತಿ ಕಲ್ಪಿಸುವ ಕೆಲಸವನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳಬೇಕು.
ಮಣಿಕಂಠ ಪಾ. ಹಿರೇಮಠ,ಚವಡಾಪೂರ, ಬಾಗಲಕೋಟೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.