‘ರಾಜ್ಯದಲ್ಲಿರುವ ಪ್ರತಿಮೆಗಳ ಪೈಕಿ ನನ್ನ ಮುತ್ತಾತ ಕಿಟೆಲ್ ಅವರ ಪ್ರತಿಮೆಗಳ ಕೈಯಲ್ಲಿ ಮಾತ್ರ ಪುಸ್ತಕ ನೋಡಿದೆ, ಉಳಿದಂತೆ ಪ್ರತಿಮಾರೂಪದ ರಾಜರ ಕೈಯಲ್ಲಿ ಕತ್ತಿ ರಾರಾಜಿಸುತ್ತಿರುತ್ತದೆ’ ಎಂದು ರೆವರೆಂಡ್ ಫರ್ಡಿನಾಂಡ್ ಕಿಟೆಲ್ ಅವರ ಮರಿ ಮೊಮ್ಮಗ ಇತ್ತೀಚೆಗೆ ಬೆಂಗಳೂರಿನಲ್ಲಿ ಹೇಳಿರುವುದನ್ನು ವೈ.ಗ.ಜಗದೀಶ್ ತಮ್ಮ ಲೇಖನದಲ್ಲಿ(ಪ್ರ.ವಾ., ನ. 16). ಪ್ರಸ್ತಾಪಿಸಿದ್ದಾರೆ. ಆದರೆ ರಾಜರ ಕೈಯಲ್ಲಿ ಖಡ್ಗ ಹಿಡಿದ ಭಂಗಿಯ ಪ್ರತಿಮೆಗಳೇ ಏಕೆ ಸಿಗುತ್ತವೆ ಎಂಬುದಕ್ಕೆ ಅವರು ಸ್ವಲ್ಪ ಅರ್ಥ ವಿವರಣೆ ನೀಡಿದ್ದರೆ ಒಳ್ಳೆಯದಿತ್ತು.
ಕ್ಷಾತ್ರ ಸಂಪ್ರದಾಯದ ಪ್ರಕಾರ ಖಡ್ಗವು ಶೂರತ್ವದ ಸಂಕೇತ. ಕ್ಷತ್ರಿಯರಿಗೆ ಮದುವೆ ಮಾಡುವಾಗಲೂ ಕತ್ತಿಯನ್ನು ಸೊಂಟಕ್ಕೆ ಸಿಕ್ಕಿಸಿರುತ್ತಾರೆ. ‘ಸಾಮ್ರಾಜ್ಯದ ರಕ್ಷಣೆ, ಶತ್ರು ಸಂಹಾರ, ಸಂಸ್ಕೃತಿಯ ಉಳಿವು ನಿನ್ನ ಪ್ರಥಮ ಆದ್ಯತೆ ಆಗಬೇಕು. ಹೆಂಡತಿ ಜೊತೆಗಿರುವಾಗಲೂ ಸುಖ ಲೋಲುಪತೆಯಲ್ಲಿ ರಾಜನಾದವ ಮೈ ಮರೆಯಬಾರದು’ ಎಂಬುದು ಆ ಸಂಪ್ರದಾಯದ ಹಿಂದಿರುವ ನೀತಿ. ಈ ರೀತಿಯ ವಸ್ತುನಿಷ್ಠ ವಿಶ್ಲೇಷಣೆ ಇದ್ದಾಗ ಕತ್ತಿ ಹಾಗೂ ಲೇಖನಿ ಸಮತೂಕ ಪಡೆಯುತ್ತವೆ. ಸಮೀಕರಣದ ಅಪಮೌಲ್ಯ ಆಗುವುದಿಲ್ಲ.
–ಆರ್.ವೆಂಕಟರಾಜು,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.