ಕೊರೊನಾ ಸೋಂಕು ತಡೆಗಟ್ಟುವ ದಿಸೆಯಲ್ಲಿ ಸರ್ಕಾರ ತೆಗೆದುಕೊಳ್ಳುತ್ತಿರುವ ಕಠಿಣ ಕ್ರಮಗಳು ಸ್ವಾಗತಾರ್ಹ. ಆದರೆ ಕರ್ನಾಟಕ ಎಂದರೆ ಕೇವಲ ಬೆಂಗಳೂರಲ್ಲ, ಸಾವಿರಾರು ಹಳ್ಳಿಗಳಿರುವ ವಿಶಾಲವಾದ ಭೂಪ್ರದೇಶ ಎಂಬ ಎಚ್ಚರದಿಂದ ನೂತನ ನಿಯಮಾವಳಿಗಳನ್ನು ಜಾರಿಗೆ ತರಬೇಕು.
ನಮ್ಮ ದೇಶದ ಹಳ್ಳಿಗಳಿಗೆ ಆಂಬುಲೆನ್ಸ್ ಸೌಲಭ್ಯ ಇಲ್ಲ. ಜಾತಿಗೊಂದು, ಧರ್ಮಕ್ಕೊಂದು ಸ್ಮಶಾನ ಇರುವ ಹಳ್ಳಿಗಳಿವೆ. ಕೆಲವು ಹಳ್ಳಿಗಳಲ್ಲಿ ಮೃತದೇಹವನ್ನು ಆ ಹಳ್ಳಿಯಿಂದ ಸ್ಮಶಾನಕ್ಕೆ ಒಯ್ಯಬೇಕಾದರೆ ಬಿದಿರಿನ ಚಟ್ಟ ಬಳಸಿ, ಹೆಗಲ ಮೇಲೆ ನಾಲ್ಕು ಜನ ಮೂರ್ನಾಲ್ಕು ಕಿ.ಮೀ. ಹೊತ್ತೊಯ್ಯಬೇಕು. ಆ ಸಮಯದಲ್ಲಿ ಆ ನಾಲ್ಕು ಜನ ಬದಲಾವಣೆ ಆಗುತ್ತ ಸಾಗಲು ಎಂಟು ಜನ ಬೇಕಾಗುತ್ತದೆ. ಪುರೋಹಿತರು, ಕಟ್ಟಿಗೆ ಒಯ್ಯುವವರು, ಸಂಪ್ರದಾಯ ಪಾಲಿಸುವ ಕುಟುಂಬದ ಜನ ಸೇರಿದಂತೆ ಇಪ್ಪತ್ತು ಜನರಾದರೂ ಆಗೇ ಆಗುತ್ತಾರೆ.
ವಾಸ್ತವ ಹೀಗಿರುವಾಗ, ಅಂತಿಮ ಯಾತ್ರೆಗೆ ಕೇವಲ ಐದು ಜನರ ನಿರ್ಬಂಧ ಸರಿಯಲ್ಲ. ಕೆಲವು ಸಂದರ್ಭಗಳಲ್ಲಿ, ಅಸುನೀಗಿದವರ ಮಕ್ಕಳ ಸಂಖ್ಯೆಯೇ ಐದು ಅಂಕೆ ದಾಟಿರುತ್ತದೆ! ಇವೆಲ್ಲವನ್ನೂ ಪರಿಗಣಿಸಿ ಕನಿಷ್ಠ ಹದಿನೈದು ಜನಕ್ಕಾದರೂ ಅಂತಿಮ ಯಾತ್ರೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕು.
-ಬೀರಣ್ಣ ನಾಯಕ ಮೊಗಟಾ, ಯಲ್ಲಾಪುರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.