ಕೊರೊನಾ ಮಹಾಮಾರಿಯ ಕಾರಣದಿಂದಾಗಿ ಸಣ್ಣ, ಮಧ್ಯಮ ಹಾಗೂ ಪ್ರತಿಷ್ಠಿತ ದೊಡ್ಡ ಐಟಿ-ಬಿಟಿ ಕಂಪನಿಗಳು ತಮ್ಮೆಲ್ಲಾ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ಒದಗಿಸಿಕೊಟ್ಟು ಒಂದೂವರೆ ವರ್ಷವೇ ಕಳೆದಿದೆ. ಪ್ರಸ್ತುತ ದಿನಗಳಲ್ಲಿ ಕೊರೊನಾ ಸೋಂಕು ಹರಡುವಿಕೆ ಕ್ಷೀಣಿಸುತ್ತಿರುವ ಹಾಗೂ ಅನೇಕ ಮಂದಿ ಲಸಿಕೆಯನ್ನು ತೆಗೆದುಕೊಂಡಿರುವ ಕಾರಣದಿಂದ ಬಹುತೇಕ ಕಂಪನಿಗಳು ಕಚೇರಿಯಿಂದ ಕೆಲಸ ಮಾಡಲು ಉದ್ಯೋಗಿಗಳನ್ನು ಕರೆಸಿಕೊಳ್ಳಲು ಮುಂದಾಗಿವೆ. ಆದರೆ, ಕೊರೊನಾದ ಮೂರನೇ ಅಲೆಯ ನಿರೀಕ್ಷೆ ಇದ್ದು, ಇಂತಹ ಸಂದರ್ಭದಲ್ಲಿ ಮನೆಯಿಂದಲೇ ಸುಸೂತ್ರವಾಗಿ ಕೆಲಸ ನಡೆಯುತ್ತಿರುವಾಗ ಅನವಶ್ಯಕವಾಗಿ ಉದ್ಯೋಗಿ ಗಳನ್ನು ಕರೆಸಿಕೊಳ್ಳಲು ಮುಂದಾಗುವುದು ಎಷ್ಟು ಸರಿ? ಈ ನಿರ್ಧಾರವು ಕೊರೊನಾ ಹರಡುವಿಕೆಗೆ ಕಾರಣ
ವಾಗಬಹುದೇನೊ. ಅಷ್ಟೇ ಅಲ್ಲದೆ ಹಲವರು ವಿವಿಧ ಪ್ರದೇಶಗಳಿಂದ ಬೆಂಗಳೂರಿಗೆ ಬರುವುದರಿಂದ ಜನದಟ್ಟಣೆ, ವಾಯುಮಾಲಿನ್ಯ, ಸಂಚಾರ ದಟ್ಟಣೆಯಂತಹ ಹಲವಾರು ಸಮಸ್ಯೆಗಳು ತಲೆದೋರುತ್ತವೆ. ಈಗಾಗಲೇ ದೆಹಲಿಯಲ್ಲಿ ಜನದಟ್ಟಣೆ, ವಾಯುಮಾಲಿನ್ಯದ ಪರಿಣಾಮವನ್ನು ಕಾಣುತ್ತಿದ್ದೇವೆ.
ಪ್ರಸ್ತುತ ಬೆಂಗಳೂರಿನ ವಾತಾವರಣವು ತಕ್ಕಮಟ್ಟಿಗೆ ಸುಧಾರಣೆಯಾಗಿದೆ. ಆದಕಾರಣ ಕಂಪನಿಗಳು ಆತುರದ ನಿರ್ಧಾರ ತೆಗೆದುಕೊಳ್ಳದೆ, ಅತಿ ಅವಶ್ಯವಿರುವವರನ್ನು ಮಾತ್ರ ಆಹ್ವಾನಿಸಿ ಇತರರಿಗೆ ಇನ್ನೂ ಕೆಲವು ದಿನಗಳ ಕಾಲ ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ಒದಗಿಸಿಕೊಟ್ಟರೆ ಸಮಾಜಕ್ಕೆ, ಕಂಪನಿಗಳಿಗೆ ಹಾಗೂ ಉದ್ಯೋಗಿ ಗಳಿಗೆ ಹಲವು ಅನುಕೂಲಗಳಾಗುವ ಸಂಭವವಿದೆ.
- ಮಹೇಶ್ ಸಿ.ಎಚ್.,ಶಿವಮೊಗ್ಗ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.