‘ಸಂಪುಟ ವಿಸ್ತರಣೆ: ಅಲೆದಾಡಿಸುವುದೇಕೆ?’ ಎಂಬ ಪ್ರಶ್ನೆಯನ್ನು ರಮಾನಂದ ಶರ್ಮಾ ತಮ್ಮ ಪತ್ರದಲ್ಲಿ ಕೇಳಿದ್ದಾರೆ (ವಾ.ವಾ., ಜುಲೈ 27). ಮುಖ್ಯಮಂತ್ರಿ ಆಯ್ಕೆ– ನೇಮಕ, ಸಂಪುಟ ರಚನೆ– ವಿಸ್ತರಣೆಯಲ್ಲಿಪಕ್ಷದ ವರಿಷ್ಠ ಮಂಡಳಿ ಅಥವಾ ಹೈಕಮಾಂಡ್ ಎನ್ನುವ ವ್ಯವಸ್ಥೆಗೆ ಯಾವ ಪಾತ್ರವೂ ಇಲ್ಲ. ಆದರೆ, ವಾಸ್ತವವೇ ಬೇರೆ! ವರಿಷ್ಠ ಮಂಡಳಿ ಎಂಬ ವ್ಯವಸ್ಥೆಗೆ ಎಲ್ಲರೂ ತಮ್ಮ ಸ್ವಂತಿಕೆಯನ್ನು ಒತ್ತೆಯಿಟ್ಟಿರುವುದರಿಂದ ರಾಜ್ಯದ ಮುಖ್ಯಮಂತ್ರಿ ತನ್ನ ಸಚಿವ ಸಂಪುಟ ರಚಿಸುವಲ್ಲಿ ಅಥವಾ ಪುನರ್ರಚನೆ ಮಾಡುವಲ್ಲಿ ವರಿಷ್ಠರ ಮುಂದೆ ಬಾಗಿ, ‘ಜಿಯಾ, ಹಸಾದ’ ಎನ್ನುವ ಸ್ಥಿತಿ, ವರಿಷ್ಠರ ಮರ್ಜಿಗೆ ಕಾಯುವ ಅನಿವಾರ್ಯ. ಆದರೆ, ಆ ಮಂಡಳಿಯ ಲೆಕ್ಕಾಚಾರವೇ ಬೇರೆ.
ಮುಖ್ಯಮಂತ್ರಿಯು ಮಂಡಳಿಯ ಆಜ್ಞಾಧಾರಕ, ಆತನಿಗೆ ತನ್ನ ಆಯ್ಕೆಯೇ ಇಲ್ಲ. ಕರ್ನಾಟಕದ ಮುಖ್ಯಮಂತ್ರಿಯು ಸಂಪುಟ ವಿಸ್ತರಣೆಗಾಗಿ ಎಷ್ಟು ಬಾರಿ ದೆಹಲಿ ಯಾತ್ರೆ ಮಾಡಿದ್ದಾರೆನ್ನುವುದು ಬಹುಶಃ ಅವರಿಗೇ ಗೊತ್ತಿಲ್ಲ! ಸಂಪುಟದಲ್ಲಿ ಯಾರು ಇರಬೇಕೆಂದು ನಿರ್ಧರಿಸುವ ಅಧಿಕಾರವು ದೂರದ ದೆಹಲಿಯಲ್ಲಿ ಕುಳಿತ, ಸಂಬಂಧಿಸಿದ ರಾಜ್ಯದವರಲ್ಲದ ಒಂದಷ್ಟು ಮಂದಿಯದು. ಜನರಿಂದ ಆಯ್ಕೆಯಾದವರು ವರಿಷ್ಠರ ಮಾತಿಗೆ ಗೋಣು ಹಾಕುವ ಮೂಲಕ ಸ್ವಂತಿಕೆಯನ್ನು ಒತ್ತೆಯಿಡಬೇಕಾದ ಸ್ಥಿತಿ ಇರುವುದು ಅದೆಂಥ ಪ್ರಜಾಸತ್ತೆಯೋ?
- ಸಾಮಗ ದತ್ತಾತ್ರಿ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.