ಕಳೆದ ವರ್ಷದ ಮಾರ್ಚ್ ತಿಂಗಳಿನಿಂದ ರಾಜ್ಯದ ಕಾರಾಗೃಹಗಳಿಗೆ ಸಾರ್ವಜನಿಕರು ಭೇಟಿ ನೀಡುವುದಕ್ಕೆ ನಿರ್ಬಂಧ ಹೇರಲಾಗಿದೆ. ಕೊರೊನಾ ಸೋಂಕಿನ ಕಾರಣದಿಂದ ವಿಚಾರಣಾಧೀನ ಮತ್ತು ಸಜಾ ಬಂದಿಗಳನ್ನು ಭೇಟಿಯಾಗುವುದಕ್ಕೆ ಅವರ ಕುಟುಂಬ ಮತ್ತು ಸ್ನೇಹಿತರಿಗೆ ತಡೆಯೊಡ್ಡಲಾಯಿತು. ಅಂದಿನಿಂದ ಇಂದಿನವರೆಗೂ ಬಂದಿಗಳು ತಮ್ಮ ಸಮೀಪದ ಬಂಧುಗಳು, ಮಕ್ಕಳು ಮರಿಗಳನ್ನು ನೋಡಲಾಗದಂತಹ ಸ್ಥಿತಿ ಇದೆ. ಅಂತಹ ಕಠಿಣವಾದ ನಿರ್ಬಂಧ ಹೇರಲಾಗಿದೆ. ವಾರಕ್ಕೊಮ್ಮೆ ಸಿಗುವ ದೂರವಾಣಿ ಸಂಪರ್ಕದಿಂದ ಮೂರ್ನಾಲ್ಕು ನಿಮಿಷ ಅವರು ಮಾತನಾಡಬಹುದಾಗಿದೆ. ಕಡೇಪಕ್ಷ ಕರ್ನಾಟಕದ ಜೈಲುಗಳಲ್ಲಿ ಲಭ್ಯವಿರುವ ವಿಡಿಯೊ ಕಾನ್ಫರೆನ್ಸ್ ಸೌಲಭ್ಯವನ್ನು ಬಳಸಿ ಸಮೀಪದ ಬಂಧುಗಳೊಂದಿಗೆ ಮಾತನಾಡುವ ವ್ಯವಸ್ಥೆಯನ್ನಾದರೂ ಕಲ್ಪಿಸಬಹುದಾಗಿತ್ತು.
ಅತಿ ಹೆಚ್ಚು ಕಾಲ ಬಂಧಿತರನ್ನು ಅವರ ಕುಟುಂಬದಿಂದ ಬೇರ್ಪಡಿಸುವುದು ಬಂಧಿತರು ಮತ್ತು ಅವರ ಅವಲಂಬಿತರ ಮೇಲೆ ಮಾನಸಿಕವಾಗಿ ಕೆಟ್ಟ ಪರಿಣಾಮವನ್ನು ಉಂಟು ಮಾಡಬಲ್ಲದು. ಬಂದಿಗಳು ತಮ್ಮ ಕುಟುಂಬದ ಸದಸ್ಯರು ಮತ್ತು ಆಪ್ತರೊಡನೆ ಒಂದಿಷ್ಟು ಕಾಲ ಜೈಲು ಆವರಣದಲ್ಲಿ ಕಳೆಯಲು ಬಯಸುವುದು ಒಂದು ಸ್ವಾಭಾವಿಕ ಹಕ್ಕಾಗಿದೆ ಎಂದು ಸುಪ್ರೀಂ ಕೋರ್ಟ್ ಕೂಡ ಹಲವು ತೀರ್ಪುಗಳಲ್ಲಿ ಉಲ್ಲೇಖಿಸಿದೆ. ಕೋವಿಡ್ ಎರಡನೇ ಅಲೆಯ ನಂತರ ಎಲ್ಲಾ ಕ್ಷೇತ್ರಗಳು ಸಾರ್ವಜನಿಕರಿಗೆ ಮುಕ್ತವಾಗಿವೆ. ಆದಷ್ಟು ಬೇಗ ಜೈಲುಗಳಿಗೆ ಸಾರ್ವಜನಿಕ ಪ್ರವೇಶ ಒದಗಿಸುವುದು ತುರ್ತಾಗಿ ಆಗಬೇಕಿದೆ.
- ಕೆ.ಬಿ.ಕೆ.ಸ್ವಾಮಿ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.