ರಾಜ್ಯದಲ್ಲಿ ಸಚಿವರಾಗಿ ಇತ್ತೀಚೆಗೆ ಪ್ರಮಾಣವಚನ ಸ್ವೀಕರಿಸಿದ್ದ ಕೆಲವರು ಖಾತೆ ಹಂಚಿಕೆಯ ನಂತರ ಅಸಮಾಧಾನ ಹೊರಹಾಕಿ, ಮುಖ್ಯಮಂತ್ರಿ ಮೇಲೆ ಒತ್ತಡ ತರುತ್ತಿರುವುದು ಸರಿಯಲ್ಲ. ಪರಿಸರ ಮತ್ತು ಪ್ರವಾಸೋದ್ಯಮ ಖಾತೆ ಕೊಟ್ಟಿರುವುದಕ್ಕೆ ಸಿಡಿದೆದ್ದಿರುವ ಆನಂದ್ ಸಿಂಗ್ ಅವರು, ಸಚಿವ ಹಾಗೂ ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಡುವಷ್ಟರ ಮಟ್ಟಿಗೆ ಬೇಸರಗೊಂಡಂತಿದೆ.
ಖಾತೆಗಳಲ್ಲಿ ಮೇಲು-ಕೀಳು ಎಂಬುದನ್ನು ಇವರು ಯಾವ ಮಾನದಂಡದಿಂದ ಅಳೆಯುತ್ತಾರೋ ಗೊತ್ತಿಲ್ಲ. ಪರಿಸರ ಯಾವ ಲೆಕ್ಕದಲ್ಲಿ ಕೀಳು? ಇಂದು ಮತ್ತು ಇನ್ನುಮುಂದೆ ಈ ಭೂಮಿಯ ಮೇಲೆ ಮಾನವ ಸಂತತಿಯ ಅಳಿವು-ಉಳಿವಿನಲ್ಲಿ ನಿರ್ಣಾಯಕ ಪಾತ್ರ ವಹಿಸುವುದು ಈ ಪರಿಸರವೇ. ಮನುಷ್ಯನ ಸ್ವಯಂಕೃತ ಅಪರಾಧ
ಗಳಿಂದಾಗಿ ಪರಿಸರ ಹಾಳಾಗಿ ಹಲವಾರು ಆತಂಕಗಳು ನಮ್ಮನ್ನು ಸುತ್ತುವರಿಯುತ್ತಿರುವ ಈ ಸಂದರ್ಭದಲ್ಲಿ, ಪರಿಸರದ ಉಳಿವೊಂದೇ ಆದ್ಯತಾ ವಿಷಯ. ಈ ಖಾತೆಯಲ್ಲಿ ಮಾಡುವಷ್ಟೂ ಕೆಲಸವಿದೆ (ಮಾಡಿದರೆ), ಗಳಿಸ
ಬಹುದಾದಷ್ಟು ಕೀರ್ತಿಯೂ ಇದೆ. ಕ್ರಿಯಾಶೀಲ ಮನಸ್ಸುಗಳಿಗೆ ಇದರಷ್ಟು ಒಳ್ಳೆಯ ಖಾತೆ ಇನ್ನೊಂದಿಲ್ಲ. ನೂತನ ಸಚಿವರು ಸದರಿ ಖಾತೆಯನ್ನು ಕಾಲ ಕಸದಂತೆ ಪರಿಗಣಿಸಿದ್ದನ್ನು ನೋಡಿದರೆ, ಮಾನವನು ಪರಿಸರವನ್ನು ನಿರ್ಲಕ್ಷಿಸುತ್ತಿರುವುದರ ನಿದರ್ಶನದಂತೆಯೂ ಇದು ಕಾಣುತ್ತದೆ. ಹೀಗಾಗಬಾರದಲ್ಲವೇ?
ಟಿ.ಎಂ.ಕೃಷ್ಣ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.